ತಮಿಳು ನಟ ಸೂರ್ಯ ಅಭಿನಯಿಸುತ್ತಿರುವ ತೆಲುಗು ಸಿನಿಮಾವೊಂದರಲ್ಲಿ ನಟ ಮಹೇಶ್ಬಾಬು ಅವರು ನಟಿಸಬೇಕಾಗಿತ್ತು. ಆದರೆ ಕಥಾವಸ್ತು ಇಷ್ಟವಾಗದ ಕಾರಣ ಅವರು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಳ್ಳಲಿಲ್ಲ ಎಂದು ಮೂಲಗಳು ತಿಳಿಸಿವೆ.
ನಿರ್ದೇಶಕ ವಿಕ್ರಂ ಕುಮಾರ್ ಮೊದಲು ಮಹೇಶ್ಬಾಬು ಅವರನ್ನು ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡಿದ್ದರು. ಚಿತ್ರಕಥೆಯನ್ನು ಓದಿದ ಮಹೇಶ್ಬಾಬು ಅವರಿಗೆ ಕಥೆಯ ಮೊದಲಾರ್ಧ ಇಷ್ಟವಾಗಿತ್ತು. ಆದರೆ ಎರಡನೇ ಭಾಗವನ್ನು ಅವರು ಮೆಚ್ಚಿಕೊಳ್ಳಲಿಲ್ಲ. ಆದ್ದರಿಂದ ಆ ಸಿನಿಮಾ ಸೂರ್ಯ ಅವರ ಪಾಲಾಯಿತು. ಇದು ಸೂರ್ಯ ಅವರ 24ನೇ ಚಿತ್ರವಾಗಿದೆ.
ಈ ಚಿತ್ರದಲ್ಲಿ ಸೂರ್ಯ ಮೂರು ಪಾತ್ರಗಳಲ್ಲಿ ನಟಿಸುತ್ತಿದ್ದು, ಅಣ್ಣ, ತಮ್ಮ ಹಾಗೂ ಅಣ್ಣನ ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಮಂತಾ ಹಾಗೂ ನಿತ್ಯಾ ಮೆನನ್ ನಾಯಕಿಯರಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಎ. ಆರ್. ರೆಹಮಾನ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.