ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ‘ದಂತ ಭಾಗ್ಯ’ ಯೋಜನೆ ಜಾರಿಗೊಳಿಸಿದೆ. ಇದು ನಿಜಕ್ಕೂ ಉತ್ತಮ ಕಾರ್ಯಕ್ರಮ. ಆದರೆ ಈ ಯೋಜನೆ ಕಾರ್ಯಗತಗೊಳಿಸಲು ಹೊರಟರೆ ಅದಕ್ಕೆ ಸಾಕಾಗುವಷ್ಟು ವೈದ್ಯರಿಲ್ಲ. 2011ರ ಜನಗಣತಿಯ ಪ್ರಕಾರ, ಕರ್ನಾಟಕದ ಜನಸಂಖ್ಯೆ 6.11 ಕೋಟಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ದಂತ ವೈದ್ಯರ ಸಂಖ್ಯೆ 300 ದಾಟುವುದಿಲ್ಲ.
ಅಂದರೆ ಸುಮಾರು ಪ್ರತಿ 2 ಲಕ್ಷ ಜನರಿಗೆ ಒಬ್ಬ ದಂತ ವೈದ್ಯ. ಇದಲ್ಲದೆ ಸುಮಾರು 8,000 ದಂತವೈದ್ಯರಿರಬಹುದು, ಅವರಲ್ಲಿ ಕೇವಲ ಅರ್ಧದಷ್ಟು ವೈದ್ಯರು ಇದೇ ವೃತ್ತಿಯಲ್ಲಿ ಮುಂದುವರೆಯುತ್ತಿದ್ದಾರೆ. ಉಳಿದವರು ಬಿಪಿಒ ಮೊದಲಾದ ಕಡೆಗಳಲ್ಲಿ ಕೆಲಸ ಮಾಡುವ ಅನಿವಾರ್ಯ ಒದಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ನಿಯಮದಂತೆ ಪ್ರತಿ 2,000 ಜನರಿಗೆ ಒಬ್ಬರು ದಂತವೈದ್ಯರು ಇರಬೇಕು. ಅದೂ ಹೋಗಲಿ, 20,000 ಜನರಿಗಾದರೂ ಒಬ್ಬರು ದಂತ ವೈದ್ಯರು ಬೇಡವೆ? ಕರ್ನಾಟಕದಲ್ಲಿ ದೇಶದಲ್ಲೇ ಹೆಚ್ಚು ದಂತ ವೈದ್ಯ ಕಾಲೇಜುಗಳಿವೆ. ಪ್ರತಿ ವರ್ಷ 2000 ದಂತ ವೈದ್ಯರು ಪದವಿ ಪಡೆದು ಹೊರ ಬರುತ್ತಿದ್ದಾರೆ. ಆದರೆ ಇವರೆಲ್ಲ ನಿಜಕ್ಕೂ ನಿರುದ್ಯೋಗಿಗಳಾಗಿ ಖಾಲಿ ಕುಳಿತಿದ್ದಾರೆ ಅಥವಾ ಇಷ್ಟು ವಿದ್ಯಾಭ್ಯಾಸ ಮಾಡಿದ ಮೇಲೆ ಜೀವನೋಪಾಯಕ್ಕೆಂದು ಬೇರೆ ಕ್ಷೇತ್ರಗಳ ಕಡೆಗೆ ಹೊರಳಿಕೊಂಡಿದ್ದಾರೆ.
ಪದವೀಧರರಾದ ದಂತ ವೈದ್ಯರು ಸೇವೆ ಮಾಡಲು ಸಿದ್ಧರಿದ್ದರೂ ಸರ್ಕಾರ ಅವರಿಗೆ ಕೆಲಸವನ್ನೇ ನೀಡುತ್ತಿಲ್ಲ. ಇಡೀ ರಾಜ್ಯದ ಸರ್ಕಾರಿ ಸೇವೆಗೆ ಕನಿಷ್ಠ 1,000 ದಂತ ವೈದ್ಯರಾದರೂ ಬೇಕಾಗುತ್ತದೆ. ಎಲ್ಲಾ ಊರುಗಳಲ್ಲೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಇವರ ಅವಶ್ಯಕತೆಯಿದೆ. ಆದರೆ ದಂತ ವೈದ್ಯರ ನೇಮಕಾತಿಯೇ ನಡೆದಿಲ್ಲ.
ಇದು ಈಗಿನ ವಿಚಾರವಲ್ಲ. ಕಳೆದ 20 ವರ್ಷಗಳಿಂದಲೂ ದಂತ ವೈದ್ಯರ ನೇಮಕಾತಿಯಾಗಲೀ, ಕಾಯಂ ಹುದ್ದೆಗಳಾಗಲೀ ಸೃಷ್ಟಿಯಾಗಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವವರೂ ಗುತ್ತಿಗೆ ಆಧಾರದ ಮೇಲೆಯೇ ಕೆಲಸ ಪಡೆದಿದ್ದಾರೆ. ಈ ಧೋರಣೆಯಿಂದ ನಿಜವಾಗಿ ಸಂಕಷ್ಟಕ್ಕೆ ಈಡಾಗಿರುವವರು ಬಡ– ಮಧ್ಯಮ ವರ್ಗದ ರೋಗಿಗಳು.
ಏಕೆಂದರೆ ಓದುವಾಗ ಶುಲ್ಕಕ್ಕೆಂದು ಲಕ್ಷಗಟ್ಟಲೆ ಹಣ ಖರ್ಚುಮಾಡಿ ಪದವಿ ಪಡೆದು ದಂತ ವೈದ್ಯರಾದವರು ಖಾಸಗಿ ಕ್ಲಿನಿಕ್ ಪ್ರಾರಂಭಿಸಲು ಮತ್ತೆ ಲಕ್ಷಾಂತರ ರೂಪಾಯಿಗಳ ಬಂಡವಾಳ ಹೂಡಬೇಕು. ಏಕೆಂದರೆ ದಂತ ವೈದ್ಯಕೀಯ ಚಿಕಿತ್ಸೆಗೆ ಬಳಸುವ ಪರಿಕರ, ಉಪಕರಣಗಳು ಬಹಳ ದುಬಾರಿ. ದಂತ ವೈದ್ಯ ತಾನು ಮೊದಲೇ ಖರ್ಚು ಮಾಡಿರುವ, ಹೂಡಿರುವ ಹಣವನ್ನು ಜನರಿಂದ ವಸೂಲು ಮಾಡುತ್ತಾನೆ.
ಪರಿಸ್ಥಿತಿ ಹೀಗಿದ್ದರೂ ಶ್ರೀಮಂತರು ಹೇಗಾದರೂ ಚಿಕಿತ್ಸೆ ಪಡೆಯುತ್ತಾರೆ. ಆದರೆ, ಬಡವರು ಮತ್ತು ಮಧ್ಯಮ ವರ್ಗದ ರೋಗಿಗಳು ಈ ದುಬಾರಿ ಖಾಸಗಿ ಚಿಕಿತ್ಸೆ ಪಡೆಯಲಾಗದೇ ಸುಮ್ಮನಿದ್ದು ಬಿಡುತ್ತಾರೆ. ಅಂಥವರು ದಂತ ಚಿಕಿತ್ಸೆಯಿಂದ ವಂಚಿತರಾಗುತ್ತಾರೆ. ಆದರೆ ಸುಮ್ಮನಿರಲೂ ಆಗದೇ, ಚಿಕಿತ್ಸೆ ಪಡೆದುಕೊಳ್ಳಲೂ ಆಗದೇ ಮೊದಲ ಹಂತದಲ್ಲಿ ಮಾತ್ರೆ, ಇಂಜೆಕ್ಷನ್ ಪಡೆದು ಹಲ್ಲಿನ ಸಮಸ್ಯೆಗೆ ತಾತ್ಕಾಲಿಕ ಶಮನ ಪಡೆಯುತ್ತಾರೆ, ಆದರೆ ಕಾಲಕಳೆದಂತೆ ಹಲ್ಲುಗಳು ತೀರಾ ಹಾಳಾದಾಗ, ವಿಧಿಯಿಲ್ಲದೆ 8–10ನೇ ವಯಸ್ಸಿಗೆ 3–4 ಹಲ್ಲುಗಳನ್ನು ತೆಗೆಸಬೇಕಾಗುತ್ತದೆ.
ಆರೋಗ್ಯ ಸಚಿವರು ಈ ವಿಚಾರದ ಬಗ್ಗೆ ತೀವ್ರವಾಗಿ ಗಮನಿಸಬೇಕಾದ ಅಗತ್ಯವಿದೆ. ದಂತ ಚಿಕಿತ್ಸೆ ಮಕ್ಕಳಿಂದ ವೃದ್ಧರ ತನಕ ಎಲ್ಲರಿಗೂ ಬೇಕಾದ ಚಿಕಿತ್ಸೆಯಾಗಿದೆ. ಇದರ ಜೊತೆಗೆ ಫ್ಲೋರೈಡ್ ಸಮಸ್ಯೆ ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳಿಗೆ ವ್ಯಾಪಿಸಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡಲು ದಂತ ವೈದ್ಯರಿಂದ ಮಾತ್ರ ಸಾಧ್ಯ. ಆರೋಗ್ಯ ಇಲಾಖೆಯು ದಂತ ವೈದ್ಯರ ಸೇವೆ ಬಳಸಿಕೊಂಡು ಬಡ ರೋಗಿಗಳಿಗೂ ಹಾಗೂ ವೈದ್ಯರಿಗೂ ಉಪಕಾರ ಮಾಡಬೇಕು.
ದಂತ ವೈದ್ಯರಾಗಲು ಓದಿ ಪದವಿ ಗಳಿಸಿಬಿಟ್ಟರೆ ಅವರಿಗೆ ಮುಂದಿನ ವಿದ್ಯಾಭ್ಯಾಸವಾಗಲೀ, ಬೇರೆ ಉದ್ಯೋಗಗಳಿಗಾಗಲೀ ಯಾವುದಕ್ಕೂ ಹೆಚ್ಚಿನ ದಾರಿಗಳೇ ಇಲ್ಲ. ಏಕೆಂದರೆ ಐಎಎಸ್, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ದಂತ ವೈದ್ಯಕೀಯ ಅಧ್ಯಯನದ ಒಂದು ಐಚ್ಛಿಕ ವಿಷಯವೇ (optional) ಇಲ್ಲ. ಇದರಿಂದ ದಂತ ವೈದ್ಯ ಕೋರ್ಸ್ ಓದಿ ಈ ಪರೀಕ್ಷೆಗಳನ್ನು ಎದು
ರಿಸುವವರು ಅನಿವಾರ್ಯವಾಗಿ ಬೇರೆ ವಿಷಯ ಆಯ್ಕೆ ಮಾಡಿಕೊಳ್ಳಬೇಕು.
ಆ ಹೊಸ ವಿಷಯಗಳ ಗಂಧ–ಗಾಳಿಯೇ ಇಲ್ಲದ ಕಾರಣ, ಅದರಲ್ಲೂ ಯಶಸ್ವಿಯಾಗಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೂಡಲೇ ದಂತ ವೈದ್ಯರ ಪರಿಸ್ಥಿತಿಯನ್ನು ಅರಿಯಬೇಕಿದೆ. ಹೇಳಿಕೊಳ್ಳಲು ವೈದ್ಯರಾದರೂ ಗ್ರಾಮಾಂತರ ಪ್ರದೇಶದಲ್ಲಿನ ಖಾಸಗಿ ಕ್ಲಿನಿಕ್ಕಿನ ದಂತ ವೈದ್ಯರ ಮಾಸಿಕ ದುಡಿಮೆ ₨ 10,000 ದಾಟದಂತಹ ದೈನೇಸಿ ಸ್ಥಿತಿಯಿದೆ. ನಗರದಲ್ಲಿನ ದಂತ ವೈದ್ಯರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
ದಂತ ವೈದ್ಯರ ನೇಮಕಾತಿಗೆ ಸರ್ಕಾರ ಒಲವು ತೋರಬೇಕಿದೆ. ಇದರಿಂದ ಜನರಿಗೆ ನಿಜಕ್ಕೂ ಈ ದಂತ ವೈದ್ಯರ ವತಿಯಿಂದ ಉತ್ತಮ ಚಿಕಿತ್ಸೆ ದೊರಕಿ ಬಾಯಿಕ್ಯಾನ್ಸರ್ನಂತಹ ಗಂಭೀರ ಸಮಸ್ಯೆಯನ್ನು ಪ್ರಾರಂಭದಲ್ಲೇ ಗುರುತಿಸಿ ಒದಗಬಹುದಾದ ಮುಂದಿನ ಸಮಸ್ಯೆಗಳನ್ನು ತಡೆಗಟ್ಟಬಹುದು. ಸ್ವಂತ ಕ್ಲಿನಿಕ್ ಮಾಡಿ ದುಡಿಮೆ ಮಾಡಲಾಗದೆ ಕ್ಲಿನಿಕ್ ಮುಚ್ಚಿದ ದಂತ ವೈದ್ಯರ ನೂರಾರು ಉದಾಹರಣೆಗಳಿವೆ.
ಬೇರೆ ಓದಿಗೂ ಹೋಗಲಾಗದೆ, ದುಡಿಮೆಯೂ ಸಾಗದೆ, ಸರ್ಕಾರಿ ಕೆಲಸವೂ ದೊರಕದೆ ದಂತ ವೈದ್ಯರಂತೂ ಹೈರಾಣಾಗಿದ್ದಾರೆ. ಮುಂದೇನು ಎಂಬ ಭವಿಷ್ಯದ ಚಿಂತೆಯಿಂದ ದಿನ ತಳ್ಳುತ್ತಿದ್ದಾರೆ. ಆತ್ಮವಿಶ್ವಾಸವೇ ಉಡುಗಿ ಹೋಗಿರುವ ನತದೃಷ್ಟ ದಂತ ವೈದ್ಯರಿಗೆ ಉದ್ಯೋಗಭಾಗ್ಯ ಕೊಟ್ಟು ಅಭಯ ನೀಡಬೇಕಾದ ಅವಶ್ಯಕತೆಯಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.