ನವದೆಹಲಿ (ಪಿಟಿಐ): ‘ನಾನು ದನದ ಮಾಂಸ ತಿನ್ನುತ್ತೇನೆ. ನಾನು ಅರುಣಾಚಲ ಪ್ರದೇಶದವನು. ಯಾರಾದರೂ ಇದನ್ನು ತಡೆಯಬಲ್ಲರೇ. ಯಾರದೇ ಆಹಾರ ಅಭ್ಯಾಸವನ್ನು ಪ್ರಶ್ನಿಸಲು ಸಾಧ್ಯವಿಲ್ಲ’ ಎಂಬ ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಹೇಳಿಕೆ ವಿವಾದ ಸೃಷ್ಟಿಸಿದೆ.
ಸಚಿವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಬಿಜೆಪಿ, ಇದರಲ್ಲಿ ಧಾರ್ಮಿಕ ಭಾವನೆಗಳಿವೆ. ಇದನ್ನು ರಾಜಕೀಯಗೊಳಿಸಲು ಬಳಸಬಾರದು ಎಂದು ಹೇಳಿದೆ. ಇತ್ತೀಚೆಗೆ ಗೋಮಾಂಸ ಸೇವನೆ ಬಗ್ಗೆ ಮಾತನಾಡಿದ್ದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಗೋಮಾಂಸ ತಿನ್ನುವುದನ್ನು ಬಿಡಲಾಗದವರು ಪಾಕಿಸ್ತಾನ ಇಲ್ಲವೇ ಯಾವುದಾದರೂ ಕೊಲ್ಲಿ ದೇಶಕ್ಕೆ ಹೋಗಬೇಕು ಎಂದು ಹೇಳಿದ್ದರು. ಇದು ವಿವಾದ ಸೃಷ್ಟಿಸಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ‘ದನದಮಾಂಸ ನಿಷೇಧದ ವಿಷಯದಲ್ಲಿ ಧಾರ್ಮಿಕ ಭಾವನೆಗಳು ಸೇರಿವೆ. ನಾನು ಇದನ್ನು ರಾಜಕೀಯ ಉದ್ದೇಶಕ್ಕೆ ಎಳೆಯಲಾರೆ’ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ದನದ ಮಾಂಸ ಭಕ್ಷಣೆ ಕುರಿತು ನೀಡಿದ್ದ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ್ದ ರಿಜಿಜು ಅವರು, ನಾನು ಗೋಮಾಂಸ ತಿನ್ನುವುದಿಲ್ಲ. ಆದರೆ ಜಾತ್ಯತೀತ ದೇಶದಲ್ಲಿ
ಆಹಾರ ಅಭ್ಯಾಸದ ಮೇಲೆ ಯಾರಿಗೂ ನಿರ್ಬಂಧ ವಿಧಿಸಲಾಗದು ಎಂದು ಹೇಳಿದ್ದಾರೆ.
ಹಿಂದೂ, ಕ್ರೈಸ್ತರು ಮತ್ತು ಮುಸ್ಲಿಂ ಧರ್ಮದವರು ಇರುವ ಭಾರತದಂತಹ ಜಾತ್ಯತೀತ ದೇಶದಲ್ಲಿ ಬಹುಸಂಖ್ಯಾತರ ಭಾವನೆಗಳನ್ನು ಗೌರವಿಸಬೇಕಾಗಿದೆ ಎಂದೂ ರಿಜಿಜು ಅವರು ಹೇಳಿದ್ದಾರೆ.