ನವದೆಹಲಿ: ಉತ್ತರ ಪ್ರದೇಶದ ದಾದ್ರಿ ಎಂಬ ಹಳ್ಳಿಯಲ್ಲಿ ಗೋಮಾಂಸ ಸೇವಿಸಿದ್ದಾರೆಂದು ಶಂಕಿಸಿ ಮಹಮ್ಮದ್ ಇಕ್ಲಾಖ್ ಎಂಬ ವ್ಯಕ್ತಿಯನ್ನು ಕೊಂದು ಹಾಕಿರುವ ಘಟನೆ ನಡೆದು ಒಂದು ವಾರ ಕಳೆದಿದೆ.
ಇದೀಗ ಭಾರತೀಯ ವಾಯುಪಡೆ ಅವರ ಕುಟುಂಬವನ್ನು ದೆಹಲಿಯಲ್ಲಿರುವ ವಾಯುನೆಲೆಗೆ ಸ್ಥಳಾಂತರಿಸಿದೆ.
ಇಕ್ಲಾಶ್ ಅವರ ಹಿರಿಯ ಮಗ ಭಾರತೀಯ ವಾಯುಪಡೆಯಲ್ಲಿ ಕೆಳಗಿನ ದರ್ಜೆಯ ಟೆಕ್ನಿಷಿಯನ್ ಆಗಿದ್ದಾರೆ.
ಪತ್ರಿಕೆಯೊಂದರ ವರದಿ ಪ್ರಕಾರ ಇಕ್ಲಾಖ್ ಕುಟುಂಬ ಸೋಮವಾರ ರಾತ್ರಿಯೇ ದಾದ್ರಿಯಿಂದ ದೆಹಲಿಯ ಸುಬ್ರತೊ ಪಾರ್ಕ್ಗೆ ಸ್ಥಳಾಂತರಗೊಂಡಿದೆ.
ಇಕ್ಲಾಖ್ ಕುಟುಂಬವನ್ನು ದೆಹಲಿಗೆ ಸ್ಥಳಾಂತರಿಸಲು ಇರುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿರುವುದಾಗಿ ‘ಐಎಎಫ್’ ಮುಖ್ಯಸ್ಥ ಅರೂಪ್ ರಾಹ ಅವರು ಅಕ್ಟೋಬರ್ 3 ರಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಇಕ್ಲಾಶ್ ನಿಧನದ ನಂತರ, ದಾದ್ರಿ ಹಳ್ಳಿಯಲ್ಲಿ ಹೇರಿದ್ದ ನಿಷೇಧವನ್ನು ಉಲ್ಲಂಘಿಸಿದ ಕಾರಣಕ್ಕೆ ಕೇಂದ್ರ ಸಚಿವ ಮಹೇಶ್ ಶರ್ಮಾ, ಬಿಜೆಪಿ ಮುಖಂಡ ಸಂಗೀತ್ ಸೋಮ್, ಬಿಎಸ್ಪಿ ಮುಖಂಡ ನಸೀಮುದ್ದೀನ್ ಸಿದ್ದಿಕಿ, ಹಿಂದೂ ರಕ್ಷಾದಳದ ಓಂಜಿ ಮಹಾರಾಜ್ ಮತ್ತು ಪರ್ವೇಜ್ ವಿರುದ್ಧ ಸ್ಥಳೀಯ ಜಿಲ್ಲಾಡಳಿತ ಪ್ರಕರಣ ದಾಖಲಿಸಿಕೊಂಡಿದೆ.