ನ್ಯೂಯಾರ್ಕ್ (ಪಿಟಿಐ): ಉತ್ತರ ಪ್ರದೇಶದ ದಾದ್ರಿ ಎಂಬ ಹಳ್ಳಿಯಲ್ಲಿ ಗೋಮಾಂಸ ಸಂಗ್ರಹಿಸಿಟ್ಟಿದ್ದಾರೆಂದು ಶಂಕಿಸಿ ವ್ಯಕ್ತಿಯೊಬ್ಬರನ್ನು ಕೊಂದು ಹಾಕಿರುವ ಘಟನೆ ಇಡೀ ದೇಶದ ಹೆಸರಿಗೆ ಕಳಂಕ ತರುವಂಥದ್ದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
‘ಇಂತಹ ಘಟನೆಗಳು ದೇಶದ ಹೆಸರಿಗೆ ಕಳಂಕ ತರುತ್ತವೆ. ಭಾರತದಂತಹ ಪ್ರೌಢ ದೇಶದಲ್ಲಿ ಇದು ನಡೆದಿರುವುದು ಆತಂಕ ಮೂಡಿಸುತ್ತದೆ. ಇದೊಂದು ದುರಾದೃಷ್ಟಕರ ಘಟನೆಯಾದರೂ ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಅವರು ಇಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಹೇಳಿದರು.