ಹೊಸ ವರ್ಷಾಚರಣೆಯಂದು ಹೊಸ ಕುಡುಕರು ಹುಟ್ಟಿಕೊಳ್ಳುತ್ತಿದ್ದಾರೆ ಎಂದು ಅಧ್ಯಯನ ಸಮೀಕ್ಷೆಯೊಂದು ಈಚೆಗೆ ವರದಿ ನೀಡಿತ್ತು. ಇದೀಗ ಚುನಾವಣಾ ಪ್ರಕ್ರಿಯೆಯಲ್ಲೂ ಅಂಥದೇ ದೃಶ್ಯ ಕಣ್ಣಿಗೆ ಬೀಳುತ್ತಿದೆ. ಅದರಲ್ಲಿ ಯುವಕರೇ ಮುಂಚೂಣಿಯಲ್ಲಿರುವುದು ನಿಜಕ್ಕೂ ದುರಂತದ ಸಂಗತಿ.
ರಾಜಕಾರಣಿಗಳೇ ಅಂಥ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಆತಂಕದ ಸಂಗತಿ. ಈ ಸಂಗತಿಯನ್ನು ನಮ್ಮ ಸಮಾಜ ತುಂಬ ಗಂಭೀರವಾಗಿ ಪರಿಗಣಿಸಬೇಕಿದೆ.
ಏಕೆಂದರೆ ಮೊದಲೇ ನಿರುದ್ಯೋಗದ ಸಮಸ್ಯೆ ನಮ್ಮ ಯುವಜನರನ್ನು ಕಾಡುತ್ತಿದೆ. ಅಂಥ ಯುವ ಜನರು ಈ ಚುನಾವಣೆಯ ಸಂದರ್ಭದಲ್ಲಿ ರಾಜಕಾರಣಿಗಳು ನೀಡುವ ಮದ್ಯದ ಅಮಲಿಗೆ ಮನಸೋತು ನಂತರ ಶಾಶ್ವತವಾಗಿ ಅಂಥ ದುಶ್ಚಟಗಳಿಗೆ ಬಲಿಯಾಗುವಂತಾಗುತ್ತದೆ.
ಈ ದುರಂತ ತಪ್ಪಿಸಲು ಪಾಲಕರು ಜಾಗರೂಕರಾಗಿರಬೇಕು; ಪ್ರಜಾಪ್ರಭುತ್ವ ನೀಡುವ ಅವಕಾಶಗಳು ಹೀಗೆ ದಾರಿ ತಪ್ಪಿ ಹೋಗದಂತೆ ಕಾಪಾಡಬೇಕು.