ಬೆಂಗಳೂರು: ‘ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ದಾಖಲಿಸಿರುವ ದೂರನ್ನು ಹಿಂಪಡೆಯುವಂತೆ ಭೂಗತ ಪಾತಕಿ ಕಲಿ ಯೋಗೇಶ್ ಕರೆ ಮಾಡಿ ಬೆದರಿಕೆ ಹಾಕಿದ’ ಎಂದು ಆರೋಪಿಸಿ ರಾಮಕಥಾ ಗಾಯಕಿ ಪ್ರೇಮಲತಾ ಅವರ ಪತಿ ದಿವಾಕರ ಶಾಸ್ತ್ರಿ ಅವರು ಬನಶಂಕರಿ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ.
‘ಬೆಳಿಗ್ಗೆ 11.51ಕ್ಕೆ ಕರೆ ಮಾಡಿದ ಪಾತಕಿ ತಾನು ಆಸ್ಟ್ರೇಲಿಯಾದಿಂದ (40523102622) ಕರೆ ಮಾಡುತ್ತಿದ್ದೇನೆ. ಸ್ವಾಮೀಜಿ ವಿರುದ್ಧ ದಾಖಲಿಸಿರುವ ದೂರು ಹಿಂಪಡೆಯಬೇಕು. ಇಲ್ಲದಿದ್ದರೆ ಕೊಲೆ ಮಾಡುತ್ತೇನೆ ಎಂದು ಬೆದರಿಸಿದ’ ಎಂದು ದಿವಾಕರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಲ್ಲದೇ, 11.54 ಹಾಗೂ 11.55ಕ್ಕೆ ಕ್ರಮವಾಗಿ 88628305770 ಮತ್ತು 85690766499 ಸಂಖ್ಯೆಗಳಿಂದ ಕರೆ ಮಾಡಿದ್ದ ವ್ಯಕ್ತಿ ಸುಮಾರು 21 ನಿಮಿಷ ನನ್ನೊಂದಿಗೆ ಮಾತನಾಡಿದ’ ಎಂದು ಅವರು ಹೇಳಿದ್ದಾರೆ. ದಿವಾಕರ ಅವರ ದೂರಿನ ಸಂಬಂಧ ಕೊಲೆ ಬೆದರಿಕೆ ಮತ್ತು ಅನಾಮಧೇಯ ಕರೆಯಿಂದ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಬಿ.ಎಸ್.ಲೋಕೇಶ್ಕುಮಾರ್ ಹೇಳಿದ್ದಾರೆ.
ಪೊಲೀಸರ ಸಮ್ಮುಖದಲ್ಲೇ ಕರೆ: ‘ಪ್ರಕರಣ ಸಂಬಂಧ ದಿವಾಕರ ಅವರು ಸಿಐಡಿ ಅಧಿಕಾರಿಗಳ ಎದುರು ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದ ಸಂದರ್ಭದಲ್ಲೇ ಅವರಿಗೆ ಈ ರೀತಿ ಬೆದರಿಕೆ ಕರೆ ಬಂದಿದೆ’ ಎಂದು ಉನ್ನತ ಪೊಲೀಸ್ ಮೂಲಗಳು ಹೇಳಿವೆ.