ರಾಜ್ಯದಲ್ಲಿ ಕಾಡುಪ್ರಾಣಿಗಳು ಮತ್ತೆ ಮತ್ತೆ ಜನವಸತಿಯ ಹಾದಿ ಹಿಡಿಯುತ್ತಿವೆ. ಗ್ರಾಮಸ್ಥರ ಮೇಲೆ ಆಕ್ರಮಣ ಮಾಡಿ ಪ್ರಾಣಹಾನಿ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಇದರಿಂದ ಪ್ರಾಣಿ ಮತ್ತು ಮನುಷ್ಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಮಧುಗಿರಿ ಬಳಿ ಶೋಭೇನಹಳ್ಳಿಯಲ್ಲಿ ಕರಡಿ ದಾಳಿಯಿಂದ ವ್ಯಕ್ತಿ ಸತ್ತಿದ್ದಾನೆ. ಮತ್ತೊಬ್ಬ ಗಾಯಗೊಂಡಿದ್ದಾನೆ.
ಚಿಕ್ಕಮಗಳೂರು ಬಳಿ ಕಾರ್ಮಿಕ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ ನರಹಂತಕ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಕೊಳ್ಳೇಗಾಲದ ಬಳಿಯೂ ಹುಲಿಯೊಂದು ಪ್ರತ್ಯಕ್ಷವಾಗಿ ಆತಂಕ ಮೂಡಿಸಿದೆ. ಬಿಳಿಗಿರಿರಂಗನಾಥಸ್ವಾಮಿ ಹುಲಿ ಅಭಯಾರಣ್ಯಕ್ಕೆ (ಬಿಆರ್ಟಿ) ಹೊಂದಿಕೊಂಡ ಬೂದಿಪುಡಗ ಗ್ರಾಮದಲ್ಲಿ ಜಿಂಕೆಯನ್ನು ಅಟ್ಟಿಸಿಕೊಂಡು ಹೊರಟ ಹುಲಿ ಕಾಡಿನಿಂದ ಹೊರಬಂದಿದೆ.
ಕ್ರೂರ ವನ್ಯಮೃಗಗಳು ಕಾಡಿನಿಂದ ಈ ರೀತಿ ನಾಡಿಗೆ ಬಂದ ಅನೇಕ ಘಟನೆಗಳು ವರದಿಯಾಗಿವೆ. ಸಾಕು ಪ್ರಾಣಿಗಳನ್ನು ತಿಂದ ಚಿರತೆಗಳನ್ನು ಗ್ರಾಮಸ್ಥರೇ ವಿಷ ಹಾಕಿ ಅಥವಾ ಹೊಡೆದು ಸಾಯಿಸಿರುವ ಅನೇಕ ಉದಾಹರಣೆಗಳಿವೆ. ಇದು ಪ್ರಾಣಿ ಪ್ರಭೇದಗಳ ಅಳಿವಿಗೆ ಕಾರಣವಾಗುತ್ತದೆ. ಬಿಆರ್ಟಿ ಕಾಡಿನಲ್ಲೇ ವಾಸಿಸುವ ಸೋಲಿಗರೊಬ್ಬರು ಕಳೆದ ತಿಂಗಳು ಹುಲಿ ಬಾಯಿಗೆ ಆಹುತಿಯಾದ ಘಟನೆಯೂ ನಡೆದಿದೆ.
ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಕಾಡು ಉಳಿದಿರುವುದೇ ವನ್ಯಜೀವಿಗಳು ಊರಿನತ್ತ ಹೆಜ್ಜೆ ಇರಿಸುತ್ತಿರುವುದಕ್ಕೆ ಕಾರಣ. ಇದರಿಂದಲೇ ಮಾನವ– ವನ್ಯಜೀವಿ ಸಂಘರ್ಷ ನಡೆಯುತ್ತಿದೆ.
ರೈತರು ಬೆವರು ಸುರಿಸಿ ತೆಗೆದ ಬೆಳೆ ಹಾನಿ, ಜಾನುವಾರು ಸಾವು, ಪ್ರಾಣ ಹಾನಿಯನ್ನು ತಡೆಯಲು ರಾಜ್ಯ ಸರ್ಕಾರದಿಂದ ದೀರ್ಘಾವಧಿ ಯೋಜನೆ ಅಗತ್ಯ. ಹುಲಿ ಅಭಯಾರಣ್ಯ ಮತ್ತು ವನ್ಯಜೀವಿಧಾಮದ ಸುತ್ತ ಒಂದರಿಂದ ಹತ್ತು ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಬೇಕು.
ನಾಗರಹೊಳೆ, ಬಂಡೀಪುರದಂತಹ ಕೆಲ ಹುಲಿ ಅಭಯಾರಣ್ಯಗಳ ವ್ಯಾಪ್ತಿಯಲ್ಲಿ ಈ ಕೆಲಸ ಪೂರ್ಣವಾಗಿದೆ. ೨೭ ವನ್ಯಜೀವಿಧಾಮಗಳಲ್ಲೂ ಈ ಕೆಲಸ ನಡೆಯಬೇಕಿದೆ. ಇದು ಘೋಷಣೆಯಾದರೆ ಕಾಡಿನ ಸುತ್ತ ಅಭಿವೃದ್ಧಿ ನಿಯಂತ್ರಿತ ಪ್ರದೇಶ ಘೋಷಣೆಯಾಗುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ವಾಣಿಜ್ಯ ಚಟುವಟಿಕೆ, ಹೋಟೆಲ್ ತಲೆ ಎತ್ತುವುದು ತಪ್ಪುತ್ತದೆ.
ಈ ವಲಯ ಒಂದು ರೀತಿಯಲ್ಲಿ ಕಾಡಿಗೆ ರಕ್ಷಣೆ ನೀಡುತ್ತದೆ. ಈ ಕೆಲಸ ಹತ್ತಾರು ವರ್ಷಗಳಿಂದ ಆಗಿಲ್ಲ. ರಾಜ್ಯದ ಅರಣ್ಯ ಇಲಾಖೆಯಿಂದ ಆಗಿರುವ ಲೋಪವಿದು. ಕಾಡಿಗೆ ರಕ್ಷಣೆ ನೀಡಿದರೆ ಮಾತ್ರ ಕಾಡುಪ್ರಾಣಿಗಳು ಗ್ರಾಮದತ್ತ ಬರುವುದು ತಪ್ಪುತ್ತದೆ. ಇದರ ಜತೆಯಲ್ಲಿ ಕಾಡನ್ನು ಪಕ್ಕದ ಕಾಡಿನ ಜತೆಯಲ್ಲಿ ಸೇರಿಸುವ ಕಾರಿಡಾರ್ ಸಹ ರಚನೆಯಾಗಬೇಕು. ಇಲಾಖೆಗೆ ಈ ಬಗ್ಗೆ ಕಾರ್ಯತಂತ್ರವೇ ಇಲ್ಲ.
ಕಾರಿಡಾರ್ ಇದ್ದರೆ ಮಾತ್ರ ವಲಸೆ ಪ್ರಾಣಿಗಳಾದ ಆನೆಗಳು ಆಹಾರ ಹುಡುಕುತ್ತಾ ಇದೇ ಜಾಡಿನಲ್ಲಿ ನಡೆಯುತ್ತವೆ. ಇಲ್ಲವಾದರೆ ಬೆಳೆ ಹಾನಿ ಖಚಿತ. ಕಾಡು ಪ್ರಾಣಿಗಳು ನಾಡಿಗೆ ನುಗ್ಗಿದಾಗ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಬಗ್ಗೆ ಸ್ಥಳೀಯರಿಗೆ ತರಬೇತಿ ನೀಡಲು ಇಲಾಖೆ ಮುಂದಾಗ-ಬೇಕು. ವನ್ಯ ಪ್ರಾಣಿಗಳಿಗೆ ಅರಿವಳಿಕೆ ಮದ್ದು ನೀಡುವ ಬಗ್ಗೆ ಸ್ಥಳೀಯರಿಗೂ ತರಬೇತಿಗಳನ್ನು ನೀಡಬಹುದು. ಇಂತಹ ಸನ್ನದ್ಧತೆ ಇದ್ದಲ್ಲಿ ತುರ್ತಾಗಿ ಪ್ರತಿಕ್ರಿಯಿಸಲು ಸಾಧ್ಯ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅನಾಹುತಗಳು ತಪ್ಪಿದ್ದಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.