ರಾಜ್ಯದಲ್ಲಿ ಸರ್ಕಾರದ ಕಾರ್ಯಶೈಲಿ ಜನಸಾಮಾನ್ಯರ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಜಿಲ್ಲಾ ಆಡಳಿತವೂ ದುರ್ಬಲಗೊಂಡಿದೆ. ಸಾಮಾಜಿಕ ಕಳಕಳಿ ಇಲ್ಲದ ಸಚಿವರು ಅಭಿವೃದ್ಧಿ ಯೋಜನೆಗಳ ಕುರಿತು ಗಮನಹರಿಸುತ್ತಿಲ್ಲ. ಜಯಂತಿ, ತಿಥಿ ಆಚರಿಸುವುದರಲ್ಲಿ ಕಾಲಹರಣ ಮಾಡುತ್ತಿರುವ ಸರ್ಕಾರದಿಂದ ಏನನ್ನು ನಿರೀಕ್ಷಿಸಲಾದೀತು?
ಕಳಸಾ ಬಂಡೂರಿ ಯೋಜನೆ, ಎತ್ತಿನಹೊಳೆ, ಕಸ್ತೂರಿ ರಂಗನ್ ವರದಿ ಮುಂತಾದ ವಿಚಾರಗಳ ಬಗ್ಗೆ ಸರ್ಕಾರದ ಬದ್ಧತೆ ದೃಢವಾಗಿಲ್ಲ. ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತಗಳಿಂದ ಜನಸಮುದಾಯ ತತ್ತರಿಸಿದೆ. ಲೋಕಾಯುಕ್ತ ವ್ಯವಸ್ಥೆ ಬಲ ಕಳೆದುಕೊಂಡಿದೆ. ಲಂಚಗುಳಿತನಕ್ಕೆ ಲಗಾಮು ಇಲ್ಲದಂತಾಗಿದೆ.
ರೈತರ ಆತ್ಮಹತ್ಯೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ಖಂಡನೀಯ. ಬರಪೀಡಿತ ಪ್ರದೇಶಗಳ ಜನರ ಗೋಳು ತೀವ್ರವಾಗುತ್ತಿದ್ದರೂ ನೋವು ನಿವಾರಣೆಗೆ ಸ್ಪಂದನ ಇಲ್ಲ. ‘ಎಲ್ಲವೂ ಸರಿಯಾಗಿದೆ; ಪ್ರತಿಪಕ್ಷಗಳ ಟೀಕೆಗೆ ಬೆಲೆ ಕೊಡೊಲ್ಲ’ ಎನ್ನುವ ಧೋರಣೆಯನ್ನು ಸಹಿಸಬೇಕೆ?