ಯಾದಗಿರಿ ಮತ್ತು ಬೆಂಗಳೂರು ಜಿಲ್ಲೆಗಳಿಂದ ಕಾಣೆಯಾಗಿದ್ದ ಮಹಿಳೆಯರಲ್ಲಿ ಕೆಲವರನ್ನಷ್ಟೇ ಪತ್ತೆ ಹಚ್ಚಲು ಸಾಧ್ಯವಾಗಿರುವುದು ‘ವೇಶ್ಯಾವಾಟಿಕೆಗೆ ದೂಡಿದವಳನ್ನು ಹಿಡಿದುಕೊಟ್ಟ ಮಹಿಳೆ’ ವಿಶೇಷ ವರದಿಯಿಂದ (ಪ್ರ.ವಾ., ಮೇ 26) ಬಹಿರಂಗವಾಗಿದೆ. ಇದು ನಿಜಕ್ಕೂ ಆಘಾತಕಾರಿ.
ದೇಶ ಬಹು ಹಿಂದಿನಿಂದಲೂ ಎದುರಿಸುತ್ತಿರುವ ಅನೇಕ ಸಾಮಾಜಿಕ ಸಮಸ್ಯೆಗಳಲ್ಲಿ ವೇಶ್ಯಾವೃತ್ತಿಯೂ ಒಂದು. ಅತ್ಯಂತ ಹೀನವೆಂದು ಬಣ್ಣಿಸಬಹುದಾದ ವೇಶ್ಯಾವೃತ್ತಿ ನಾಗರಿಕ ಸಮಾಜಕ್ಕೆ ಕಳಂಕಪ್ರಾಯ.
ಪುರುಷ ಪ್ರಧಾನ ಸಮಾಜ ಉಳಿಸಿ ಬೆಳೆಸಿಕೊಂಡು ಬಂದ ಈ ಕೆಟ್ಟ ಪದ್ಧತಿ ಇಂದು ದಂಧೆಯಾಗಿ ಮಾರ್ಪಟ್ಟಿದೆ. ಈ ವೃತ್ತಿಯಲ್ಲಿ ಸಿಕ್ಕಿಹಾಕಿಕೊಂಡು ನರಳುವ ಅಸಹಾಯಕ ಸ್ತ್ರೀಯರ ಬದುಕು ದಯನೀಯವಾಗಿದೆ.
ಸಮಾಜವು ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ವೇಶ್ಯಾವೃತ್ತಿಗೆ ಕಾರಣವಾದ ಪ್ರಮುಖ ಅಂಶಗಳನ್ನು ಗುರುತಿಸಿ ಈ ಸಮಸ್ಯೆಯನ್ನು ಹೋಗಲಾಡಿಸಲು ಹಾಗೂ ಮಹಿಳೆಗೆ ಸಮಾಜದಲ್ಲಿ ಆರೋಗ್ಯಕರ ಬದುಕನ್ನು ರೂಪಿಸಲು ಶ್ರಮಿಸಬೇಕು.