ನವದೆಹಲಿ (ಐಎಎನ್ಎಸ್): ಪಕ್ಷದ ಸ್ಥಳೀಯ ಮುಖಂಡರ ಒಳಜಗಳ ಮತ್ತು ಸಾಮರಸ್ಯದ ಕೊರತೆಯ ಕಾರಣ ದೆಹಲಿ ವಿಧಾನಸಭೆ ಚುನಾವಣೆಯ ನೇತೃತ್ವವನ್ನು ತಾವೇ ವಹಿಸಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಿರ್ಧರಿಸಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಮಂಗಳವಾರ ಪ್ರಕಟವಾಗಲಿರುವ ಜಾರ್ಖಂಡ್ ಹಾಗೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣಾ ಫಲಿತಾಂಶಕ್ಕಾಗಿ ಅಮಿತ್ ಷಾ ಎದುರು ನೋಡುತ್ತಿದ್ದಾರೆ. ಬಳಿಕ 2015ರ ಫೆಬ್ರುವರಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಸಲುವಾಗಿ ಎರಡು ತಿಂಗಳ ಕಾಲ ದೆಹಲಿಯತ್ತ ಅವರು ಗಮನ ಕೇಂದ್ರೀಕರಿಸಲಿದ್ದಾರೆ ಎಂದು ಪಕ್ಷದ ಬೆಳವಣಿಗೆಯ ಕುರಿತು ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
‘ಪ್ರಸ್ತುತ ದೆಹಲಿ ಬಿಜೆಪಿಯ ಎಲ್ಲರೂ ತಾನೇ ಮುಖಂಡ ಎಂದು ಭಾವಿಸಿಕೊಳ್ಳುತ್ತಿದ್ದಾರೆ. ಇದು ಅತಿ ದೊಡ್ಡ ಗೊಂದಲ ಸೃಷ್ಟಿಸಿದೆ. ಹೀಗಾಗಿ ಪಕ್ಷಕ್ಕೆ ಒಬ್ಬ ಪ್ರಮುಖರ ನಿರ್ದೇಶನ ಮತ್ತು ಮಾರ್ಗದರ್ಶನದ ಅಗತ್ಯವಿದೆ’ ಎಂದು ಮೂಲಗಳು ಹೇಳಿವೆ.