ನವದೆಹಲಿ (ಐಎಎನ್ಎಸ್): ರಾಜಕೀಯ ಪಕ್ಷಗಳು ₨ 20 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ದೇಣಿಗೆ ನೀಡಿದವರ ವಿವರಗಳನ್ನು ಸಲ್ಲಿಸುವುದು ಕಡ್ಡಾಯ. ಆದರೆ 2012–13ನೇ ವರ್ಷದಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ₨11.14 ಕೋಟಿ ದೇಣಿಗೆ ನೀಡಿದ 703 ಜನರ ವಿವರಗಳನ್ನು ಸಲ್ಲಿಸಲಾಗಿಲ್ಲ ಎಂದು ಪ್ರಜಾಸತ್ತಾತ್ಮಕ ಸುಧಾರ-ಣೆಗಳ ಸಂಸ್ಥೆ (ಎಡಿಆರ್) ವರದಿ ಹೇಳಿದೆ.
‘₨ 29 ಲಕ್ಷ ದೇಣಿಗೆ ನೀಡಿರುವ 43 ದಾನಿಗಳ ಹೆಸರು ಮತ್ತು ವಿಳಾಸಗಳನ್ನು ರಾಜಕೀಯ ಪಕ್ಷಗಳು ತಮ್ಮ ಲೆಕ್ಕಪತ್ರದಲ್ಲಿ ಪ್ರಕಟಿಸಿಯೇ ಇಲ್ಲ’ ಎಂದು ಎಡಿಆರ್ ಹೇಳಿದೆ. ₨ 11.14 ಕೋಟಿ ದೇಣಿಗೆ ನೀಡಿರುವವರನ್ನು ಪಕ್ಷಗಳು ನೀಡಿದ ಹೆಸರು ಮತ್ತು ವಿಳಾಸದಲ್ಲಿ ಗುರುತಿಸುವುದು ಸಾಧ್ಯವಾಗಿಲ್ಲ ಎಂದೂ ಎಡಿಆರ್ ತಿಳಿಸಿದೆ.
ಹಾಗೆಯೇ ₨ 10.84 ಕೋಟಿ ದೇಣಿಗೆ ನೀಡಿರುವ 655 ವ್ಯಕ್ತಿಗಳ ವಿಳಾಸಗಳನ್ನೂ ಬಿಜೆಪಿ, ಕಾಂಗ್ರೆಸ್, ಸಿಪಿಐ, ಸಿಪಿಎಂ, ಬಿಎಸ್ಪಿ ಮತ್ತು ಎನ್ಸಿಪಿಗಳು ಪ್ರಕಟಿಸಿಲ್ಲ ಎಂದು ಎಡಿಆರ್ ವರದಿ ತಿಳಿಸಿದೆ.
₨ 20 ಸಾವಿರಕ್ಕಿಂತ ಹೆಚ್ಚಿನ ದೇಣಿಗೆ ನೀಡಿದ ವ್ಯಕ್ತಿಗಳ ಹೆಸರು, ವಿಳಾಸ, ಪ್ಯಾನ್ ಸಂಖ್ಯೆ ಮತ್ತು ದೇಣಿಗೆ ಪಾವತಿಯಾದ ವಿಧಾನಗಳ ವಿವರಗಳನ್ನು ನೀಡುವುದನ್ನು ಚುನಾವಣಾ ಆಯೋಗ ಕಡ್ಡಾಯಗೊಳಿಸಿದೆ. ವರ್ಷಕ್ಕೊಂದು ಬಾರಿ ಈ ವಿವರಗಳನ್ನು ಸಲ್ಲಿಸಬೇಕಾಗಿದೆ.
ಆದರೆ ಆಯೋಗದ ಈ ನಿಯಮದ ಬಗ್ಗೆ ರಾಷ್ಟ್ರೀಯ ರಾಜಕೀಯ ಪಕ್ಷಗಳು ಕುರುಡಾಗಿವೆ ಎಂದು ಎಡಿಆರ್ ಹೇಳಿದೆ. ಈ ಪಕ್ಷಗಳು 3,777 ದಾನಿಗಳಿಂದ ₨ 99.14 ಕೋಟಿ ದೇಣಿಗೆ ಪಡೆದಿವೆ. ಆದರೆ ನಿಯಮ ಪಾಲಿಸಿಲ್ಲ ಎಂದು ಹೇಳಿದೆ.
ಒಟ್ಟು 3,775 ದಾನಿಗಳಲ್ಲಿ ₨37.-64 ಕೋಟಿ ದೇಣಿಗೆ ನೀಡಿರುವ 2,371 ದಾನಿಗಳ ಪ್ಯಾನ್ ಸಂಖ್ಯೆಗಳನ್ನು ರಾಜಕೀಯ ಪಕ್ಷಗಳು ಸಲ್ಲಿಸಿಲ್ಲ. ಈ ಪಟ್ಟಿಯಲ್ಲಿ ಬಿಜೆಪಿ ಪ್ರಥಮ ಸ್ಥಾನದಲ್ಲಿದ್ದು, ₨ 25.99 ಕೋಟಿ ದೇಣಿಗೆ ನೀಡಿರುವ 1,670 ದಾನಿಗಳ ಪ್ಯಾನ್ ಮಾಹಿತಿಯನ್ನು ಬಿಜೆಪಿ ನೀಡಿಲ್ಲ.
ರಾಷ್ಟ್ರೀಯ ರಾಜಕೀಯ ಪಕ್ಷಗಳ 2012–13ನೇ ಹಣಕಾಸು ವರ್ಷದ ವರಮಾನ ತೆರಿಗೆ ಮಾಹಿತಿ ಮತ್ತು ದೇಣಿಗೆ ವರದಿಗಳ ಆಧಾರದಲ್ಲಿ ಎಡಿಆರ್ ಈ ವರದಿಯನ್ನು ಸಿದ್ಧಪಡಿಸಿದೆ. ಅದರ ಪ್ರಕಾರ, ಕಾಂಗ್ರೆಸ್ ಅತಿ ಹೆಚ್ಚು ವರಮಾನವನ್ನು ಗಳಿಸಿದ್ದು ₨ 425.69 ಕೋಟಿ ಹಣ ಪಡೆದಿದೆ.
₨ 324.16 ಕೋಟಿ ದೇಣಿಗೆ ಪಡೆದಿರುವ ಬಿಜೆಪಿ ಎರಡನೇ ಸ್ಥಾನದಲ್ಲಿದೆ.