ನವದೆಹಲಿ (ಪಿಟಿಐ): ‘ದೇಶವು ಅಭಿವೃದ್ಧಿ ಪಥದಲ್ಲಿದೆ. ಆದರೆ, ನಾವು ಇನ್ನೂ ಬಹು ದೂರ ಸಾಗಬೇಕಾಗಿದೆ’ ಎಂದು ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಅಭಿಪ್ರಾಯಪಟ್ಟರು.
ಯೋಜನಾ ಆಯೋಗಕ್ಕೆ ವಿದಾಯ ಹೇಳುತ್ತಿರುವ ಸಂದರ್ಭದಲ್ಲಿ ಆಯೋಗದ ಸದಸ್ಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಸಿಂಗ್, ಭಾರತದ್ದು ಪ್ರಗತಿಯ ಯಶೋಗಾಥೆ. ಆದರೆ, ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸಲು ನಾವು ಬಹು ದೂರ ಸಾಗಬೇಕಿದೆ’ ಎಂದು ಪ್ರತಿಪಾದಿಸಿದರು.
‘ಮಾರುಕಟ್ಟೆ ವ್ಯವಸ್ಥೆ ಮೇಲೆಯೇ ಹೆಚ್ಚು ಅವಲಂಬಿತವಾಗಿರುವ ಇಂದಿನ ಮುಕ್ತ ಮತ್ತು ಉದಾರ ಆರ್ಥಿಕ ಪರಿ ಸ್ಥಿತಿಯಲ್ಲಿ ಯೋಜನಾ ಆಯೋಗವು ಹೊಸ ಜಗತ್ತಿನಲ್ಲಿ ಯಾವ ರೀತಿಯ ಪಾತ್ರ ನಿರ್ವಹಿಸಬೇಕು ಎಂಬುದನ್ನು ನಾವು ಅಭಿವ್ಯಕ್ತಿ ಪಡಿಸುವ ಅಗತ್ಯವಿದೆ’ ಎಂದು ಆಯೋಗದ ಅಧ್ಯಕ್ಷರೂ ಆದ ಸಿಂಗ್ ಹೇಳಿದರು.
ಯುಪಿಎಯ 10 ವರ್ಷಗಳ ಆಡಳಿತದಲ್ಲಿ ಆಯೋಗದ ಕಾರ್ಯನಿರ್ವಹಣೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಿ, ದೇಶದ ಆರ್ಥಿಕ ಸ್ಥಿತಿಗತಿ ಬಗ್ಗೆ ವಿವೇಚನೆಯುಕ್ತ ವಿಶ್ಲೇಷಣೆಗೆ ಆಯೋಗವು ಒಳಪಡಲಿದೆ ಮತ್ತು ದೇಶದ ಅಭಿವೃದ್ಧಿಯಲ್ಲಿ ನಿರ್ವಹಿಸುತ್ತಿರುವ ಪಾತ್ರವನ್ನು ಅದು ಭವಿಷ್ಯದಲ್ಲೂ ಮುಂದು ವರಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸಿಂಗ್ ಅವರು 1980ರ ಏಪ್ರಿಲ್ನಿಂದ ಯೋಜನಾ ಆಯೋಗದೊಂದಿಗೆ ಗುರುತಿಸಿಕೊಂಡಿದ್ದಾರೆ. ಸದಸ್ಯ ಕಾರ್ಯದರ್ಶಿಯಾಗಿ ಆಯೋಗ ಸೇರಿದ್ದ ಸಿಂಗ್, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಆಯೋಗದ ಉಪಾಧ್ಯಕ್ಷರಾಗಿದ್ದರು.1991–95ರ ಅವಧಿಯಲ್ಲಿ ತಾವು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಆಗಿನ ಯೋಜನಾ ಆಯೋಗದ ಉಪಾಧ್ಯಕ್ಷ, ಈಗಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ನೀಡಿದ್ದ ಬೆಂಬಲವನ್ನು ಸಿಂಗ್ ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದರು.