ಹೈದರಾಬಾದ್ (ಪಿಟಿಐ): ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ನಡೆಯಲಿರುವ ಕ್ರಿಕೆಟ್ ಸರಣಿಯ ಮೊದಲ ಮೂರು ಪಂದ್ಯಗಳಿಗೆ ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ವಿರಾಟ್ ಕೊಹ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ಲಂಕಾ ವಿರುದ್ಧದ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ನ ಐದು ಪಂದ್ಯಗಳ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಬಿಸಿಸಿಐ ಆಯ್ಕೆ ಸಮಿತಿ ಮಂಗಳವಾರ ತಂಡ ಪ್ರಕಟಿಸಿದ್ದು, ದೋನಿ ಅವರ ಬದಲಿಗೆ ಪಶ್ಚಿಮ ಬಂಗಾಳದ ಆಟಗಾರ ವೃದ್ಧಿಮಾನ್ ಸಹಾ ಅವರಿಗೆ 15 ಆಟಗಾರರ ತಂಡದಲ್ಲಿ ಅವಕಾಶ ಲಭಿಸಿದೆ.
ಭಾರತದ ಜತೆಗಿನ ಸರಣಿಯನ್ನು ವೆಸ್ಟ್ ಇಂಡೀಸ್ ತಂಡವು ಮೊಟಕುಗೊಳಿಸಿದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಬಿಸಿಸಿಐ ಲಂಕಾದೊಂದಿಗೆ ಸರಣಿ ಆಯೋಜಿಸಿದೆ.
ಸ್ಪೀನ್ನರ್ ಕುಲದೀಪ್ ಯಾದವ್ ಅವರ ಬದಲಿಗೆ ವೆಸ್ಟ್ಇಂಡೀಸ್ ಸರಣಿಗೆ ವಿಶ್ರಾಂತಿ ಪಡೆದಿದ್ದ ರವಿಚಂದ್ರನ್ ಅಶ್ವಿನ್ ಅವರು ತಂಡಕ್ಕೆ ಮರಳಿದ್ದಾರೆ. ಗಾಯಗೊಂಡಿರುವ ಮೊಹಿತ್ ಶರ್ಮಾ ಅವರ ಸ್ಥಾನವನ್ನು ವೇಗಿ ವರುಣ್ ಆ್ಯರನ್ ತುಂಬಲಿದ್ದಾರೆ.
ಲಂಕಾ ವಿರುದ್ಧದ ಐದು ಪಂದ್ಯಗಳು ಕಟಕ್, ಹೈದರಾಬಾದ್, ರಾಂಚಿ, ಕೋಲ್ಕತ್ತ ಹಾಗೂ ಅಹಮದಾಬಾದ್ನಲ್ಲಿ ನಡೆಯಲಿದ್ದು, ಈ ಸಂಬಂಧ ಶೀಘ್ರವೇ ವಿವರಣೆ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಖರ್ ಧವನ್ ಹಾಗೂ ಅಜಿಂಕ್ಯಾ ರಹಾನೆ ಅವರನ್ನು ಆರಂಭಿಕ ಆಟಗಾರರಾಗಿ ಉಳಿಸಿಕೊಳ್ಳಲಾಗಿದ್ದು, ಗಾಯದಿಂದ ಚೇತರಿಸಿಕೊಂಡಿರುವ ರೋಹಿತ್ ಶರ್ಮಾ ಅವರನ್ನು ಲಂಕಾ ವಿರುದ್ಧ ನಡೆಯಲಿರುವ ಭಾರತ ‘ಎ’ ತಂಡಕ್ಕೆ ನೇಮಿಸಲಾಗಿದೆ.