ನವದೆಹಲಿ (ಪಿಟಿಐ): ಅಮೆರಿಕಕ್ಕೆ ತಮ್ಮ ಐದು ದಿನಗಳ ಪ್ರವಾಸವು ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಬಾಂಧವ್ಯದಲ್ಲಿ ಹೊಸ ಅಧ್ಯಾಯ ತೆರೆಯಲಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಆ ದೇಶಕ್ಕೆ ಐದು ದಿನಗಳ ಪ್ರವಾಸಕ್ಕೆ ಹೊರಡುವ ಮುನ್ನ ಗುರುವಾರ ಅವರು ಹೀಗೆ ಹೇಳಿದರು.
ಮೋದಿ ಅವರು ತಮ್ಮ ಭೇಟಿ ವೇಳೆ ಎರಡು ರಾಷ್ಟ್ರಗಳ ನಡುವೆ ಕಳೆದ ವರ್ಷದಿಂದ ಇರುವ ರಾಜತಾಂತ್ರಿಕ ಬಿಕ್ಕಟ್ಟನ್ನು ಸರಿಪಡಿಸುವ ಆಶಯವನ್ನು ಹಾಗೂ ಭಾರತವು ವ್ಯಾಪಾರೋದ್ಯಮಕ್ಕೆ ಮುಕ್ತ ಎಂಬುದನ್ನು ಬಿಂಬಿಸಲು ಯತ್ನಿಸಲಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರೊಂದಿಗೆ ಮಾತುಕತೆ ನಡೆಸಲು ತಾವು ಕಾತರದಿಂದ ಕಾಯುತ್ತಿರುವುದಾಗಿಯೂ ಅವರು ತಿಳಿಸಿದರು.
ಎರಡೂ ರಾಷ್ಟ್ರಗಳ ಹಿತಾಸಕ್ತಿ ರಕ್ಷಣೆಯ ಜತೆಗೆ ಜಾಗತಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ದ್ವಿಪಕ್ಷೀಯ ಬಾಂಧವ್ಯವನ್ನು ಹೊಸ ಸ್ತರಕ್ಕೆ ಹೇಗೆ ಕೊಂಡೊಯ್ಯಬಹುದೆಂಬ ಬಗ್ಗೆ ಒಬಾಮ ಅವರೊಂದಿಗೆ ಚರ್ಚಿಸುವುದಾಗಿ ಅವರು ಹೇಳಿದರು. ಮೋದಿ ಅವರಿಗೆ ಒಮಾಮ ದಂಪತಿ ಸೆ.29ರಂದು ಖಾಸಗಿ ಔತಣಕೂಟ ಏರ್ಪಡಿಸಿದ್ದಾರೆ. ಆದರೆ ಈ ಔತಣಕೂಟದಲ್ಲಿ ಮೋದಿ ಅವರು ಚಹಾ ಮತ್ತು ನಿಂಬೆ ಪಾನಕವನ್ನು ಮಾತ್ರ ಸೇವಿಸುತ್ತಾರೆ ಎನ್ನಲಾಗಿದೆ.
ಮೋದಿ ಅವರು ನವರಾತ್ರಿ ಸಂದರ್ಭದಲ್ಲಿ ಪ್ರತಿವರ್ಷವೂ ಆಚರಿಸುತ್ತಾ ಬಂದಿರುವುದು ಇದಕ್ಕೆ ಕಾರಣ. ಇದಾದ ಮರುದಿನ ಇಬ್ಬರೂ ನಾಯಕರ ನಡುವೆ ಶೃಂಗಸಭೆ ನಡೆಯಲಿದೆ. ಇನ್ನು ಮೋದಿ ಅವರು ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಮಾತನಾಡಿ, ದುರ್ಬಲವಾಗಿರುವ ಜಾಗತಿಕ ಆರ್ಥಿಕ ಸ್ಥಿತಿ, ಜಗತ್ತಿನ ವಿವಿಧ ಭಾಗಗಳಲ್ಲಿರುವ ಪ್ರಕ್ಷುಬ್ಧತೆ, ಹವಾಮಾನ ವೈಪರೀತ್ಯ, ಬಡತನ ನಿರ್ಮೂಲನೆ ಬಗ್ಗೆ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.
21ನೇ ಶತಮಾನದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುಕ್ಕೆ ಪೂರಕವಾಗಿ ವಿಶ್ವಸಂಸ್ಥೆಯ ನೀತಿ ನಿಯಮಾವಳಿಯನ್ನು ರೂಪಿಸಲು ಒತ್ತಾಯಿಸುವುದಾಗಿಯೂ ಅವರು ಹೇಳಿದ್ದಾರೆ. ಮೋದಿ ಅವರು ಸೆ.29ರ ಬೆಳಿಗ್ಗೆ ಉಪಹಾರದ ವೇಳೆ 11 ಪ್ರಮುಖ ಕಾರ್ಪೊರೇಟ್ ಉದ್ಯಮಿಗಳನ್ನು ಭೇಟಿಯಾಗಲಿದ್ದಾರೆ. ಅದೇ ದಿನ ಅವರು ನ್ಯೂಯಾರ್ಕ್ನಲ್ಲಿ ಅವರು ಇತರ ಆರು ವ್ಯಾಪಾರೋದ್ಯಮಿಗಳ ಜತೆ ಮಾತುಕತೆ ನಡೆಸುವರು. ಮೋದಿ ಅವರು ತಮ್ಮ ಪ್ರವಾಸದ ವೇಳೆ ನ್ಯೂಯಾರ್ಕ್ನ ಅವಳಿ ಗೋಪುರದ ಮೇಲಿನ ಉಗ್ರರ ದಾಳಿಯಲ್ಲಿ ಮೃತರಾದವರ ಸ್ಮಾರಕಕ್ಕೂ ಭೇಟಿ ನೀಡುವರು.
72 ಕೋಟಿ ದೇಣಿಗೆ
ನವದೆಹಲಿ (ಪಿಟಿಐ): ಆಫ್ರಿಕಾ ಖಂಡದಲ್ಲಿ ಮಾರಣಾಂತಿಕ ಎಬೋಲಾ ವೈರಸ್ ನಿಯಂತ್ರಿಸುವ ಕಾರ್ಯಕ್ರಮಗಳಿಗಾಗಿ ವಿಶ್ವಸಂಸ್ಥೆಗೆ ಸುಮಾರು 72 ಕೋಟಿ ರೂಪಾಯಿಗಳ (1.2 ಕೋಟಿ ಡಾಲರ್) ದೇಣಿಗೆಯನ್ನು ಭಾರತ ಗುರುವಾರ ಪ್ರಕಟಿಸಿದೆ. ನರೇಂದ್ರ ಮೋದಿ ಅವರು ಐದು ದಿನಗಳ ಅಮೆರಿಕ ಪ್ರವಾಸಕ್ಕೆ ಹೊರಡುವ ಮುನ್ನ ಈ ದೇಣಿಗೆಗೆ ಅನುಮತಿ ನೀಡಿದರು.
ಮೋದಿ ಅವರು ಸೆ.27ರಂದು ನ್ಯೂಯಾರ್ಕ್ನ ವಿಶ್ವಸಂಸ್ಥೆಯಲ್ಲಿ 69ನೇ ಮಹಾಧಿವೇಶನದಲ್ಲಿ ಮಾತನಾಡುವ ಕಾರ್ಯಕ್ರಮವೂ ಇದೆ.
‘ಆಫ್ರಿಕಾ ಖಂಡದಲ್ಲಿನ ಎಬೋಲಾ ಸಾಂಕ್ರಾಮಿಕದ ಭೀಕರತೆ ಹಿಂದೆಂದೂ ಕಂಡರಿಯದಷ್ಟು ತೀವ್ರವಾಗಿದೆ’ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಬಾನ್ ಕಿ ಮೂನ್ ಅವರು ಕಳೆದ ವಾರ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.