ಪುಣೆಯಲ್ಲಿ ಐಟಿ ಉದ್ಯೋಗಿ ಮೊಹಸಿನ್ ಷೇಕ್ (28) ಹತ್ಯೆಯು ಹೀನವಾದಂತಹ ಕೋಮು ಅಪರಾಧ. ಯಾವುದೇ ಪ್ರಚೋದನೆ ಇಲ್ಲದಿದ್ದರೂ ಈ ಐಟಿ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿರುವುದು ಆತಂಕಕಾರಿ.
ಸಾಮಾಜಿಕ ಮಾಧ್ಯಮ ಫೇಸ್ಬುಕ್ನಲ್ಲಿ ಛತ್ರಪತಿ ಶಿವಾಜಿ ಹಾಗೂ ಬಾಳ ಠಾಕ್ರೆಯವರ ಅವಹೇಳನಕಾರಿ ಚಿತ್ರಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ಪುಣೆಯಲ್ಲಾದ ದೊಂಬಿಯ ಸಂದರ್ಭದಲ್ಲಿ ಈ ಹತ್ಯೆ ನಡೆದಿದೆ ಎಂಬುದು ದುರದೃಷ್ಟಕರ. ಈ ವಿಚಾರದಲ್ಲಿ ಈ ಯುವ ಐಟಿ ಉದ್ಯೋಗಿಯ ಪಾತ್ರ ಏನೇನೂ ಇರಲಿಲ್ಲ.
ಹೀಗಿದ್ದೂ ಧರಿಸಿದ್ದ ಟೋಪಿ ಹಾಗೂ ದಾಡಿಯಿಂದ ಮುಸ್ಲಿಮನಂತೆ ಕಾಣಿಸಿದ್ದೇ ಆತನ ಮೇಲೆರಗಲು ಗುಂಪಿಗೆ ಪ್ರಚೋದನೆ ಆಯಿತೆಂಬುದು ಆಘಾತಕಾರಿ. ವಯಸ್ಸಾದ ತಂದೆತಾಯಿ ಇರುವ ಕುಟುಂಬದ ಆಧಾರಸ್ತಂಭವಾಗಿದ್ದ ಯುವಜೀವವೊಂದು ದ್ವೇಷ ಅಪರಾಧಗಳಿಗೆ ಹೀಗೆ ಬಲಿಯಾದದ್ದು ವಿಷಾದದ ಸಂಗತಿ.
ಮೊಹಸಿನ್ ಷೇಕ್ ಮೇಲೆ ಹಲ್ಲೆ ನಡೆಸಿದ ಗುಂಪು ತೀವ್ರವಾದಿ ಹಿಂದೂ ಸಂಘಟನೆಯಾದ ಹಿಂದೂ ರಾಷ್ಟ್ರ ಸೇನಾಗೆ ಸೇರಿದೆ. ತುಂಡು ಸಂಘಟನೆಯಾದ ಈ ಹಿಂದೂ ರಾಷ್ಟ್ರ ಸೇನೆಯಲ್ಲಿ ನೂರಿನ್ನೂರು ಸದಸ್ಯರಿರಬಹುದು ಅಷ್ಟೆ. ಹೀಗಾಗಿ ಈ ಸಂಘಟನೆಯ ಚಟುವಟಿಕೆಗಳ ಮೇಲೆ ಕಣ್ಣಿಡುವುದು ಸರ್ಕಾರಕ್ಕೆ ಅಸಾಧ್ಯವೇನಲ್ಲ.
ಆದರೆ ಇಂತಹ ಸಂಘಟನೆಗಳು ನಡೆಸಿದ ಕುಕೃತ್ಯಗಳಿಗೆ ತರ್ಕ ಹುಡುಕುತ್ತಾ ಸಮರ್ಥಿಸಿಕೊಳ್ಳುವ ಹಾದಿಯನ್ನು ರಾಜಕಾರಣಿಗಳು ತುಳಿಯುವುದು ಮಾತ್ರ ಸರಿಯಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚುರಪಡಿಸಿದ ವಿಚಾರಗಳು ಇಂತಹ ಕೆಟ್ಟ ಪರಿಣಾಮಗಳಿಗೆ ಕಾರಣವಾಗುವುದು ‘ಸಹಜ’ ಎಂದು ಪುಣೆಯ ಬಿಜೆಪಿ ಸಂಸತ್ ಸದಸ್ಯ ಅನಿಲ್ ಶಿರೋಲ್ ಈ ಘಟನೆಗೆ ಸಂಬಂಧಿಸಿದಂತೆ ಹೇಳಿರುವುದು ಖಂಡನೀಯ.
ಚುನಾವಣೆಯಲ್ಲಿ ಬಿಜೆಪಿಯ ಇತ್ತೀಚಿನ ದಿಗ್ವಿಜಯ, ಹಿಂದೂ ರಾಷ್ಟ್ರ ಸೇನಾದಂತಹ ತುಂಡು ಸಂಘಟನೆಗಳು ಹೆಚ್ಚಿನ ಬಲ ಪಡೆದುಕೊಳ್ಳಲು ಕಾರಣವಾಗಬಾರದು. ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಇದಕ್ಕೆ ಅವಕಾಶ ನೀಡದಂತೆ ಮೊದಲು ತಮ್ಮ ನಡೆ ನುಡಿಗಳಲ್ಲಿ ಬಿಜೆಪಿ ಸಂಸತ್ ಸದಸ್ಯರು ಎಚ್ಚರ ವಹಿಸಬೇಕು.
ಮಹಾರಾಷ್ಟ್ರದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಲಾಭ ಗಳಿಸುವ ಏಕೈಕ ದೃಷ್ಟಿಯಿಂದ ಜನರನ್ನು ಧ್ರುವೀಕರಿಸುವ ಯಾವ ಪ್ರಯತ್ನಕ್ಕೂ ಮಹಾರಾಷ್ಟ್ರ ಸರ್ಕಾರ ಅವಕಾಶ ನೀಡಬಾರದು. ಇಂತಹ ಯಾವುದೇ ಪ್ರಯತ್ನವನ್ನು ದೊಡ್ಡದಾಗಿ ಬೆಳೆಯಲು ಬಿಡದೆ ಆರಂಭದಲ್ಲೇ ಹೊಸಕಿ ಹಾಕಬೇಕು.
ವಿವಿಧ ಧರ್ಮ, ಪಂಥ ಹಾಗೂ ಸಾಂಸ್ಕೃತಿಕ ಸಮುದಾಯಗಳ ಶಾಂತಿಯುತ ಸಹಬಾಳ್ವೆಯನ್ನು ಕಂಡಿರುವ ಮಹಾರಾಷ್ಟ್ರದಲ್ಲಿ ದ್ವೇಷದ ರಾಜಕಾರಣ ಬೆಳೆಯಲು ಬಿಡಬಾರದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.