ಒಂಬತ್ತು ಹಂತಗಳಲ್ಲಿ ನಡೆಯುತ್ತಿರುವ 2014ರ ಲೋಕಸಭೆ ಚುನಾವಣೆಯ ಉತ್ತರಾರ್ಧದ ಪ್ರಚಾರ ಕಾರ್ಯದಲ್ಲಿ ಹಿಂದುತ್ವದ ಮಾತುಗಳ ಅಬ್ಬರ ಹೆಚ್ಚಾಗಿದೆ. ಇಂತಹ ಮಾತುಗಳು ರಾಜಕಾರಣದ ಪರಿಭಾಷೆ ಹಾಗೂ ಸಾಮಾಜಿಕ ಸ್ವಾಸ್ಥ್ಯಕ್ಕೆ ಉಂಟು ಮಾಡುವ ಹಾನಿ ಗಂಭೀರವಾದುದು. ಹಿಂದೂ ಬಡಾವಣೆಗಳಲ್ಲಿ ಆಸ್ತಿ ಖರೀದಿಸಲು ಮುಸ್ಲಿಮರಿಗೆ ಅವಕಾಶ ನೀಡಬಾರದು ಎಂಬಂತಹ ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಅವರ ಮಾತುಗಳು ರಾಷ್ಟ್ರದ ಸಾಂವಿಧಾನಿಕ ಮೌಲ್ಯಗಳನ್ನೇ ಗಾಳಿಗೆ ತೂರುವಂತಿವೆ.
ಹಾಗೆಯೇ, ನರೇಂದ್ರ ಮೋದಿ ಅವರಿಗೆ ವಿರೋಧವಾಗಿರುವವರು ಚುನಾವಣೆಗಳ ನಂತರ ಪಾಕಿಸ್ತಾನಕ್ಕೆ ಹೋಗಲಿ ಎಂಬಂತಹ ಎಚ್ಚರಿಕೆಯನ್ನು ಈ ಮೊದಲು ಬಿಹಾರದ ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ನೀಡಿದ್ದರು. ತಮ್ಮ ಈ ಮಾತಿಗೆ ಈವರೆಗೆ ಅವರು ವಿಷಾದ ವ್ಯಕ್ತಪಡಿಸಿಲ್ಲ. ‘ಶೇ 100ರಷ್ಟು ಮತದಾನ ಮಾಡಿ ಇಲ್ಲದಿದ್ದರೆ ಇತಿಹಾಸವಾಗಿಬಿಡುತ್ತೀರಿ’ ಎಂಬಂತಹ ಕರೆಯನ್ನು ಹಿಂದೂಗಳಿಗೆ ಆರ್ಎಸ್ಎಸ್ ನೀಡಿದೆ. ‘ಮೋದಿ ಅಧಿಕಾರಕ್ಕೆ ಬಂದರೆ ಆರು ತಿಂಗಳಲ್ಲಿ ಪಾಕಿಸ್ತಾನವನ್ನು ನಾಶ ಮಾಡಿಬಿಡುತ್ತಾರೆ’ ಎಂದು ಶಿವಸೇನೆ ಹೇಳಿದೆ.
ಇಂತಹ ಮಾತುಗಳಿಗೆ ಬಿಜೆಪಿ ಪ್ರತಿಕ್ರಿಯೆ ಹೆಚ್ಚೇನೂ ತೀವ್ರವಾಗಿ ಹೊರಹೊಮ್ಮಿಲ್ಲ ಎಂಬುದು ವಿಷಾದದ ಸಂಗತಿ. ಬಿಜೆಪಿ ಹಿತಚಿಂತಕರೆಂದು ಪ್ರತಿಪಾದಿಸಿಕೊಳ್ಳುವವರ ಬೇಜವಾ ಬ್ದಾರಿ ಹೇಳಿಕೆಗಳನ್ನು ತಾವು ಒಪ್ಪುವುದಿಲ್ಲ ಎಂದಷ್ಟೇ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ ಈ ಮಾತುಗಳಿಗೆ ತನ್ನ ಅಂತರವನ್ನು ಔಪಚಾರಿಕ ನೆಲೆಯಲ್ಲಿ ಬಿಜೆಪಿ ಕಾಯ್ದುಕೊಂಡಿದೆ ಅಷ್ಟೆ. ಇಂತಹ ಮಾತುಗಳು ಬಹುಸಂಖ್ಯಾತರ ಪರವಾದ ಕಾರ್ಯಸೂಚಿ-ಯನ್ನು ಮುನ್ನೆಲೆಗೆ ತರುವಂತಹದ್ದಲ್ಲದೆ ಅಲ್ಪಸಂಖ್ಯಾತರಲ್ಲಿ ಅಸುರಕ್ಷತೆಯ ಭಾವನೆ ಬಿತ್ತುವಂತಹದ್ದು. ಧರ್ಮದ ಆಧಾರದ ಮೇಲೆ ಮತಗಳ ಕ್ರೋಡೀಕರಣಕ್ಕೆ ನಡೆಸುವ ಈ ಪ್ರಯತ್ನ ಚುನಾವಣೆ ಮುಗಿಯುವ ಮುಂಚೆಯೇ ಸಮಾಜ ಹಾಗೂ ರಾಜಕಾರಣವನ್ನು ವಿಭಜಿಸುವಂತಹದ್ದು.
ಒಳ್ಳೆಯ ಆಡಳಿತ, ಅಭಿವೃದ್ಧಿ, ಭ್ರಷ್ಟಾಚಾರದ ಅಂತ್ಯ, ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಇತ್ಯಾದಿ ವಿಚಾರಗಳೇ ತಮ್ಮ ಚುನಾವಣಾ ಪ್ರಚಾರದ ಮೂಲದ್ರವ್ಯ ಎಂದು ಬಿಜೆಪಿ ಪ್ರತಿಪಾದಿಸಿಕೊಂಡಿದೆ. ಈ ಗುರಿಗಳ ಸಾಧನೆಗೆ ಸಮರ್ಥ ನಾಯಕರೆಂದು ನರೇಂದ್ರ ಮೋದಿಯವರನ್ನು ಬಿಂಬಿಸಲಾಗಿದೆ. ಆದರೆ ಕೋಮುವಾದಿ ಹಾಗೂ ವಿಭಜಕ ಭಾವೋದ್ರೇಕಗಳಿಗೆ ಪುಷ್ಟಿ ನೀಡುವಂತಹ ಮಾತುಗಳು, ಈ ಘೋಷಿತ ಕಾರ್ಯಸೂಚಿಯ ಬಗ್ಗೆ ಪಕ್ಷಕ್ಕಿರುವ ಬದ್ಧತೆಯನ್ನು ಸಂಶಯಿಸುವಂತೆ ಮಾಡುತ್ತದೆ. ಇಂತಹ ಹೇಳಿಕೆಗಳನ್ನು ನೀಡಿದ ವ್ಯಕ್ತಿಗಳ ವಿರುದ್ಧ ಅದು ಯಾವುದೇ ಕ್ರಮ ಕೈಗೊಂಡಿಲ್ಲ. ತಾವು ಇಂತಹ ಮಾತುಗಳನ್ನಾಡಿಲ್ಲ ಎಂದು ತೊಗಾಡಿಯಾ ನಿರಾಕರಣೆಯ ಹೇಳಿಕೆ ನೀಡಿದರಷ್ಟೆ. ಆದರೆ ತೊಗಾಡಿಯಾ ಮಾತುಗಳು ಚಿತ್ರೀಕರಣವಾಗಿರುವ ದೃಶ್ಯಗಳ ಸಾಕ್ಷ್ಯಗಳಿವೆ. ಸಂಘ ಪರಿವಾರದ ತುಂಡು ಸಂಘಟನೆಗಳು ಸಾಧಿಸಲೆತ್ನಿಸುತ್ತಿರುವ ಅತಿರೇಕದ ಪ್ರಭಾವದ ಬಗ್ಗೆ ಬಿಜೆಪಿಗೆ ಸ್ಪಷ್ಟತೆ ಇರುವುದು ಅಗತ್ಯ. ಸೂಕ್ಷ್ಮ ವಿಚಾರಗಳ ಬಗ್ಗೆ ಬೇರೆಬೇರೆ ರೀತಿ ಮಾತನಾಡುತ್ತಾ ವಿಭಿನ್ನ ನಿಲುವುಗಳಿಗೆ ಅಂಟಿಕೊಂಡಲ್ಲಿ ಅದು ಪಕ್ಷದ ನಿಲುವುಗಳು ಹಾಗೂ ಕಾರ್ಯತಂತ್ರಗಳಿಗೆ ವಿಶ್ವಾಸಾರ್ಹತೆ ತರುವುದಿಲ್ಲ .
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.