ಗಂಭೀರ ಸ್ವರೂಪವಲ್ಲದ ಕಾಯಿಲೆ ಇಲ್ಲದಿದ್ದರೂ ವೈದ್ಯರು ಧನದಾಹದಿಂದ ಅಮಾಯಕ ಮಹಿಳೆಯರ ಗರ್ಭಕೋಶಗಳನ್ನು ತೆಗೆದುಹಾಕುವುದು (ಪ್ರ.ವಾ., ಜೂನ್ 30) ಅಕ್ಷಮ್ಯ. ಈ ಬಗ್ಗೆ ದಾಖಲೆಗಳ ಸಮೇತ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲದಿರುವುದು ವಿಪರ್ಯಾಸ.
ಇಂತಹ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಎಷ್ಟು ಮುಗ್ಧ ಮಹಿಳೆಯರು ಶಸ್ತ್ರಚಿಕಿತ್ಸೆಗೆ ಒಳಗಾಗುವರೋ? ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗಳು ಹೆಚ್ಚಾಗಲು ಕಾರಣವನ್ನು ಸಹ ತಿಳಿದುಕೊಳ್ಳಬೇಕು.
ಖಾಸಗಿ ಆಸ್ಪತ್ರೆಗಳಲ್ಲಿ ಕೆಲವು ಶಸ್ತ್ರಚಿಕಿತ್ಸೆಗಳನ್ನು ನಡೆಸಬೇಕಾದರೆ ಸರ್ಕಾರದಿಂದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಬೇಕು. ಅಂದಾಗ ಮಾತ್ರ ಇಂತಹ ಪಿಡುಗನ್ನು ಸ್ವಲ್ಪಮಟ್ಟಿಗಾದರೂ ತಡೆಗಟ್ಟಬಹುದು.