ಮೋಗಾ, ಪಂಜಾಬ್ (ಪಿಟಿಐ): ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಕುಟುಂಬಕ್ಕೆ ಸೇರಿದ ಬಸ್ನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಸಾವನ್ನಪ್ಪಿದ ಬಾಲಕಿಯ ಕುಟುಂಬದವರು ಬಸ್ ಮಾಲೀಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆ ಭಾನುವಾರವೂ ಮುಂದುವರಿದಿದೆ. ಇದರಿಂದ ಬಾಲಕಿಯ ಅಂತ್ಯ ಸಂಸ್ಕಾರ ಮತ್ತಷ್ಟು ವಿಳಂಬವಾಗಿದೆ.
ಆರ್ಬಿಟ್ ಬಸ್ ಸಂಸ್ಥೆಯ ಸಹ ಮಾಲೀಕರಾಗಿರುವ ಉಪಮುಖ್ಯಮಂತ್ರಿ ಸುಖ್ಬಿರ್ ಬಾದಲ್ ವಿರುದ್ಧ ಪ್ರಕರಣ ದಾಖಲಿಸುವಂತೆ ಹಾಗೂ ಸಂಸ್ಥೆ ಪರವಾನಗಿ ರದ್ದು ಪಡಿಸುವ ತನಕ ಬಾಲಕಿಯ ಸಂಸ್ಕಾರ ನಡೆಸಲು ಅವರ ಕುಟುಂಬ ನಿರಾಕರಿಸಿದೆ.
ಸರ್ಕಾರಿ ಆಸ್ಪತ್ರೆಯ ಎದುರು ಬಾಲಕಿಯ ಕುಟುಂಬ ನಡೆಸುತ್ತಿರುವ ಪ್ರತಿಭಟನೆಗೆ ಸ್ಥಳೀಯ ರಾಜಕಾರಣಿಗಳು, ಸಾಮಾಜಿಕ ಸಂಸ್ಥೆಗಳು ಹಾಗೂ ಸಂಘರ್ಷ ಸಮಿತಿ ಕೈಜೋಡಿಸಿವೆ. ಮತ್ತೊಂದೆಡೆ, ಬಾಲಕಿಯ ಮೃತದೇಹವನ್ನು ಸಿಂಘವಾಲ್ ಗ್ರಾಮದಲ್ಲಿರುವ ಶವಾಗಾರದಲ್ಲಿ ಇಡಲಾಗಿದೆ.
‘ಸರ್ಕಾರಿ ಆಸ್ಪತ್ರೆಯ ಎದುರು ಪ್ರತಿಭಟನೆ ಮುಂದುವರಿದಿದೆ’ ಎಂದು ಸಂಘರ್ಷ ಸಮಿತಿಯ ಸದಸ್ಯ ಬಲವಂತ್ ಮಖೂ ಅವರು ತಿಳಿಸಿದ್ದಾರೆ.
ಬಸ್ ಮಾಲೀಕರ ವಿರುದ್ಧ ಪ್ರಕರಣ ಸಾಧ್ಯವಿಲ್ಲ: ಜಿಲ್ಲಾಧಿಕಾರಿ
ಇನ್ನೊಂದೆಡೆ, ಬಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಆದರೆ, 20 ಲಕ್ಷ ರೂಪಾಯಿ ಪರಿಹಾರ ನೀಡಲು ಹಾಗೂ ಬಾಲಕಿಯ ತಾಯಿಗೆ ಸರ್ಕಾರಿ ನೌಕರಿ ನೀಡಲು ಸಿದ್ಧ ಎಂದು ಮೋಗಾ ಜಿಲ್ಲಾಧಿಕಾರಿ ಪರ್ಮಿಂದರ್ ಸಿಂಗ್ ಗಿಲ್ಲ ತಿಳಿಸಿದ್ದಾರೆ.
‘ಅಪರಾಧದ ಬಗ್ಗೆ ಅರಿವೇ ಇಲ್ಲದ ವ್ಯಕ್ತಿಯನ್ನು ಹೇಗೆ ಬಂಧಿಸುವುದು? ಜತೆಗೆ ಇದು ನ್ಯಾಯಬದ್ಧವಾಗಿ ಸಾಧ್ಯವೂ ಇಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.