ನವದೆಹಲಿ (ಪಿಟಿಐ): ಧರ್ಮ ಸಹಿಷ್ಣುತೆ ಬೆಳೆಸಿಕೊಳ್ಳುವುದಕ್ಕೆ ಕರೆ ನೀಡಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ತಾವು ನಂಬಿರುವ ಧರ್ಮವನ್ನು ಅನುಸರಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಎಲ್ಲಿಯವರೆಗೆ ಧರ್ಮದ ಆಧಾರದಲ್ಲಿ ಒಡಕು ಮೂಡುವುದಿಲ್ಲವೋ ಅಲ್ಲಿಯವರೆಗೆ ಭಾರತವು ಮುನ್ನಡೆ ಸಾಧಿಸುತ್ತದೆ ಎಂದು ಹೇಳಿದರು.
ಇಲ್ಲಿನ ಸಿರಿಫೋರ್ಟ್ ಸಭಾಂಗಣದಲ್ಲಿ ಮಾತನಾಡಿ, ಪ್ರತಿ ವ್ಯಕ್ತಿಗೂ ಯಾವುದೇ ಭಯ ಹಾಗೂ ಕಿರಿಕಿರಿ ಇಲ್ಲದೇ ತನ್ನ ಧರ್ಮವನ್ನು ಆಚರಿಸುವ ಹಕ್ಕು ಇದೆ ಎಂದು ಬಲವಾಗಿ ಪ್ರತಿಪಾದಿಸಿದರು.
ಇತ್ತೀಚೆಗೆ ಭಾರತದಲ್ಲಿ ಬಲಪಂಥೀಯ ಹಿಂದೂ ಸಂಘಟನೆಗಳು ನಡೆಸುತ್ತಿರುವ ಮರುಮತಾಂತರ ಕಾರ್ಯಕ್ರಮ ತೀವ್ರ
ವಿವಾದ ಎಬ್ಬಿಸಿರುವ ಹೊತ್ತಿನಲ್ಲಿಯೇ ಒಬಾಮ ಅವರು ಧರ್ಮಸಹಿಷ್ಣುತೆಗೆ ಒತ್ತು ನೀಡಿ ಮಾತನಾಡಿರುವುದು ಮಹತ್ವ ಪಡೆದುಕೊಂಡಿದೆ.
‘ಭಾರತದ ಸಂವಿಧಾನದ ೨೫ನೇ ವಿಧಿಯು ನಿಮಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ನೀಡಿದೆ. ಜಗತ್ತಿನಾದ್ಯಂತ ನಾವು ಅಸಹಿಷ್ಣುತೆ,
ತಾರತಮ್ಯಕ್ಕೆ ಒಳಗಾಗಿದ್ದೆ! ವಿವೇಕಾನಂದರ ಸ್ಮರಣೆ |
ಅಹಿಂಸೆ ಹಾಗೂ ಭಯೋತ್ಪಾದಕ ಚಟುವಟಿಕೆಗಳನ್ನು ನೋಡುತ್ತಿದ್ದೇವೆ. ಅಂಧಾಭಿಮಾನದಿಂದ ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನವನ್ನು ತಡೆಯಬೇಕಿದೆ’ ಎಂದು ಕರೆ ನೀಡಿದರು.
ಒಬಾಮ ಭಾಷಣ ಆಲಿಸುವುದಕ್ಕೆ ಸುಮಾರು ೨೦ ಸಾವಿರ ಜನ ಸೇರಿದ್ದರು. ಇವರಲ್ಲಿ ಯುವಜನರೇ ಹೆಚ್ಚಿದ್ದರು. ನಮಸ್ತೆ ಎಂದು ಹಿಂದಿಯಲ್ಲಿ ಮಾತು ಆರಂಭಿಸಿದ ಒಬಾಮ ತಮ್ಮ ಭಾಷಣ ಮಧ್ಯದಲ್ಲಿ ಕೆಲವು ಹಿಂದಿ ಪದಗಳನ್ನು ಬಳಸಿದ್ದು ವಿಶೇಷವಾಗಿತ್ತು.
ಅಮೆರಿಕ ಅಧ್ಯಕ್ಷರ ಮಾತಿನ ಮೋಡಿಗೆ ಒಳಗಾದ ಜನ ಆಗಾಗ ಚಪ್ಪಾಳೆ ತಟ್ಟುತ್ತ ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಲಿವುಡ್ ನಟ ಶಾರೂಖ್ ಖಾನ್, ಕ್ರೀಡಾಪಟುಗಳಾದ ಮಿಲ್ಕಾ ಸಿಂಗ್, ಮೇರಿ ಕೋಮ್, ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರ ಸಾಧನೆಯನ್ನು ಶ್ಲಾಘಿಸುವುದಕ್ಕೆ ಒಬಾಮ ಮರೆಯಲಿಲ್ಲ.
ಸಾಹಸಕ್ಕೆ ಬೆರಗಾದೆ...: ‘ಗಣರಾಜ್ಯೋತ್ಸವದ ಪಥಸಂಚಲದ ವೇಳೆ ಯುವಕರು ರಾಯಲ್ ಎನ್ಫೀಲ್ಡ್ ಬೈಕ್ಗಳಲ್ಲಿ ಮಾಡಿದ ಸಾಹಸ ನೋಡಿ ಬೆರಗಾದೆ. ನನಗೂ ಬೈಕ್ ಓಡಿಸುವ ಆಸೆ ಆಯಿತು. ಆದರೆ ನನ್ನ ಭದ್ರತಾ ಸಿಬ್ಬಂದಿ ಇದಕ್ಕೆ ಅವಕಾಶ
ಕೊಡುವುದಿಲ್ಲ’ ಎಂದು ಒಬಾಮ ಅವರು ಬೇಸರದಿಂದ ನುಡಿದರು.
‘ದಿಲ್ ವಾಲೆ ದುಲ್ಹನಿಯಾ ಲೆ ಜಾಯೇಂಗೆ’ ಡೈಲಾಗ್
ಒಬಾಮ ಒಂದು ಸಂದರ್ಭದಲ್ಲಿ ‘ದಿಲ್ ವಾಲೆ ದುಲ್ಹನಿಯಾ ಲೆ ಜಾಯೇಂಗೆ’ ಚಿತ್ರದ ಡೈಲಾಗ್ ಉಲ್ಲೇಖಿಸಿದಾಗ ಜನಸ್ತೋಮದಿಂದ ಹರ್ಷೋದ್ಗಾರ ಕೇಳಿಬಂತು.
‘೨೦೧೦ರಲ್ಲಿ ನಾನು ಭಾರತಕ್ಕೆ ಬಂದಿದ್ದಾಗ ಮುಂಬೈನಲ್ಲಿ ದೀಪಾವಳಿ ಹಬ್ಬಕ್ಕೆ ಸಾಕ್ಷಿಯಾಗಿದ್ದೆ. ಭಾಂಗ್ರಾ ನೃತ್ಯದಲ್ಲಿ ಹೆಜ್ಜೆ ಹಾಕಿದ್ದೆ. ಅಲ್ಲದೇ ನಾನು ಮತ್ತು ಮಿಷೆಲ್ ಮಕ್ಕಳೊಂದಿಗೆ ನೃತ್ಯ ಮಾಡಿದ್ದೆವು. ಆದರೆ ಈ ಬಾರಿ ಆ ಅವಕಾಶ ಸಿಗಲಿಲ್ಲ. ಸೆನೊರಿಟಾ, ಬಡೆ ಬಡೆ ದೇಶೋಂ ಮೆ... ನಾನು ಏನು ಹೇಳುತ್ತಿದ್ದೇನೆ ಎನ್ನುವುದು ನಿಮಗೆ ಗೊತ್ತು’ ಎಂದು ಒಬಾಮ ಅವರು ನಗುತ್ತ ನುಡಿದರು.
ಶಾರೂಖ್ ಪ್ರತಿಕ್ರಿಯೆ: ಅಮೆರಿಕದ ಅಧ್ಯಕ್ಷರ ಭಾಷಣದಲ್ಲಿ ನನ್ನ ಸಂಭಾಷಣೆ ಉಲ್ಲೇಖವಾಗಿರುವುದಕ್ಕೆ ಖುಷಿಯಾಗಿದೆ. ಒಬಾಮ ಅವರು ಈ ಬಾರಿ ಭಾಂಗ್ರಾ ನೃತ್ಯಕ್ಕೆ ಹೆಜ್ಜೆ ಹಾಕದೇ ಇರಬಹುದು, ಆದರೆ ಇನ್ನೊಮ್ಮೆ ಇಲ್ಲಿಗೆ ಬಂದಾಗ ಚಂಯ್ಯಾ ಚಂಯ್ಯಾ ಹಾಡಿಗೆ ಹೆಜ್ಜೆ ಹಾಕಲಿ’ ಎಂದು ಶಾರೂಖ್ ಖಾನ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.