ಧಾರವಾಡ: ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸತತ 4 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಹಾಗೂ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಸಚಿವ ಸಂಪುಟದಲ್ಲಿ ಪ್ರವಾಸೋದ್ಯಮ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರಾಗಿ ಕೆಲಸ ಮಾಡಿದ್ದ ಸರೋಜಿನಿ ಮಹಿಷಿ (87) ಅವರು ಭಾನುವಾರ ನವದೆಹಲಿಯಲ್ಲಿ ನಿಧನರಾದುದರಿಂದ ಧಾರ ವಾಡದಲ್ಲಿರುವ ಅವರ ಮನೆಯಲ್ಲಿ ಶೋಕ ಮಡುಗಟ್ಟಿತ್ತು.
ಅವರ ತಂಗಿ ಸಾವಿತ್ರಿ ಮಹಿಷಿ, ಅಕ್ಕನ ಅಗಲಿಕೆ ಯಿಂದಾಗಿ ತಮ್ಮ ಬಾಲ್ಯದ ನೆನಪುಗಳನ್ನು ಮೆಲಕು ಹಾಕುತ್ತಾ ಕಣ್ಣೀರಿಡುತ್ತಿದ್ದರು.
ಈ ದುಃಖದ ನಡುವೆಯೇ ತಮ್ಮ ಅಕ್ಕ ಸರೋಜಿನಿ ಅವರ ಕೆಲವೊಂದಿಷ್ಟು ವಿಚಾರಗ ಳನ್ನು ಮಾಧ್ಯಮ ದವರ ಎದುರು ಬಿಚ್ಚಿಟ್ಟ ಸಾವಿತ್ರಿ, ‘ಸರೋಜಿನಿ ಅತ್ಯಂತ ಕ್ರಿಯಾಶೀಲ ಹಾಗೂ ಉತ್ಸಾಹಿ ಮಹಿಳೆಯಾಗಿದ್ದರು. ವಿದ್ಯಾರ್ಥಿ ಜೀವನದಿಂದಲೇ ಅವರು ರಾಜಕೀಯದಲ್ಲಿ ಹೆಚ್ಚು ಆಸಕ್ತಿ ವಹಿಸಿ, 1962ರಲ್ಲಿ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಅಂದು ಕೇವಲ ₨ 10 ಸಾವಿರ ಖರ್ಚು ಮಾಡಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರು. ಸರೋಜಿನಿಗೆ ನಾನೂ ಸೇರಿದಂತೆ ಐವರು ಸಹೋದರಿಯರು ಹಾಗೂ ಇಬ್ಬರು ಸಹೋದರರಿದ್ದಾರೆ’ ಎಂದರು.
‘ರಾಜಕೀಯಕ್ಕೆ ಹೋಗುವುದಕ್ಕೂ ಮುನ್ನ ಧಾರವಾಡದ ರಾಮನಗರದಲ್ಲಿ ಅವರು ಮನೆ ನಿರ್ಮಿಸಿದ್ದರು. ಅವರ ನೆನಪಿಗೆ ಇದೊಂದೇ ಮನೆ ನಮ್ಮೊಡನೆ ಇದೆ. ಸಹೋದರ, ಸಹೋದರಿ ಯರು ಸೇರಿ ನಾವು ಕಟ್ಟಿದ ಶಿಕ್ಷಣ ಸಂಸ್ಥೆಗಳು ಹಾಗೂ ಚಾರಿಟಬಲ್ ಟ್ರಸ್ಟ್ಗಳು ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಿವೆ. ಅವುಗಳು ಮಾಡುತ್ತಿರುವ ಜನಪರ ಕಾರ್ಯ ಗಳಲ್ಲಿ ಅಕ್ಕ ಸರೋಜಿನಿಯ ನೆನಪುಗಳಿರುತ್ತವೆ. ರಾಜ್ಯದ ಜನರ ಕಷ್ಟವನ್ನು ನೋಡ ಲಾರದೇ ಅಕ್ಕ ‘ಸರೋಜಿನಿ ಮಹಿಷಿ ವರದಿ’ಯನ್ನು ವರ್ಷ ಪೂರ್ಣ ರಾಜ್ಯದಾದ್ಯಂತ ಸಂಚರಿಸಿ ಸಿದ್ಧಪಡಿಸಿದ್ದರು. ಇಲ್ಲಿಯವರೆಗೆ ಆಡಳಿತ ನಡೆಸಿದ ಸರ್ಕಾ ರಗಳು ಅದನ್ನು ಅನುಷ್ಠಾನ ಮಾಡಿಲ್ಲ. ಆದರೆ, ಇನ್ನು ಮುಂದಾದರೂ ಸರ್ಕಾರ ಅದನ್ನು ಅನುಷ್ಠಾನ ಗೊಳಿಸಿದರೆ ಜನರಿಗೆ ತುಂಬಾ ಅನುಕೂಲವಾಗುತ್ತದೆ’ ಎಂದು ಹೇಳುವಷ್ಟರಲ್ಲಿ ಸಾವಿತ್ರಿ ಅವರ ಕಣ್ಣುಗಳು ತೇವಗೊಂಡಿದ್ದವು.
ಸರೋಜಿನಿ ಶಿಕ್ಷಣ: ೧೯೨೭ರ ಮಾರ್ಚ್ ೩ರಂದು ಬಿಂದುರಾವ್ ಮಹಿಷಿ ಹಾಗೂ ಕಮಲಾಬಾಯಿ ಅವರ ಉದರದಲ್ಲಿ ಜನಿಸಿದ್ದ ಸರೋಜಿನಿ, ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ವನ್ನು ಧಾರವಾಡದಲ್ಲೇ ಪೂರ್ಣ್ ಗೊಳಿಸಿ, ಸಾಂಗ್ಲಿಯ ಮಿಲಿಂಗಟನ್ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತ ವಿಷಯದಲ್ಲಿ ಬಿ.ಎ. ಮತ್ತು ಎಂ.ಎ. ಪದವಿ ಪಡೆದಿದ್ದರು. ಕರ್ನಾಟಕ, ವಿಜಯಪುರ, ಹಂಪಿ ಹಾಗೂ ಉಜ್ಜಯನಿ ವಿಶ್ವವಿದ್ಯಾಲಯಗಳು ಸರೋಜಿನಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.