ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ನೀಡಲಾಗುವ ಪಡಿತರ ಕಾರ್ಡ್ಗಳು ಅರ್ಹರಿಗಷ್ಟೇ ತಲುಪುತ್ತಿಲ್ಲ ಎಂಬ ದೂರು ಹಳೆಯದು. ಬಡತನ ನಿವಾರಣೆಗೆ ರೂಪುಗೊಳ್ಳುವ ಯೋಜನೆಗಳನ್ನೂ ದುರುಪಯೋಗ ಮಾಡಿಕೊಂಡು ಅವುಗಳ ಲಾಭವನ್ನು ಅನರ್ಹರು ಪಡೆಯುವುದು ನಡೆದುಕೊಂಡೇ ಬಂದಿದೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳುತ್ತಿರುವುದೂ ಇದೇ ಮೊದಲಲ್ಲ. ದೇಶದ ಎಲ್ಲ ರಾಜ್ಯಗಳೂ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿವೆ. ಹೀಗಿದ್ದೂ ಅಕ್ರಮ ಕಾರ್ಡ್ಗಳ ಹಾವಳಿ ನಿಂತಿಲ್ಲ ಎಂಬುದು ಸಮಸ್ಯೆಯ ತೀವ್ರತೆಗೆ ಸಾಕ್ಷಿ. ಈಗ ಅಕ್ರಮಗಳ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಮುಂದಾಗಿರುವ ಸರ್ಕಾರ, ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಹೇಳಿದೆ. ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ಪಡೆದುಕೊಂಡವರಿಂದ ಸಬ್ಸಿಡಿ ಮೊತ್ತ ವಸೂಲು ಮಾಡಲಾಗುವುದು ಎಂದೂ ಹೇಳಿದೆ. ಅಕ್ರಮವೆಸಗಿದವರು ಸ್ವಯಂಪ್ರೇರಣೆಯಿಂದ ತಪ್ಪೊಪ್ಪಿಕೊಂಡಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವುದಿಲ್ಲ ಎಂಬಂಥ ರಿಯಾಯಿತಿ ಘೋಷಿಸಿರುವುದು ಸರಿಯಾದುದೆ. 15 ಲಕ್ಷಕ್ಕೂ ಅಧಿಕ ಅಕ್ರಮ ಕಾರ್ಡ್ಗಳು ರಾಜ್ಯದಲ್ಲಿವೆ ಎಂಬುದು ಈ ಅಕ್ರಮ ಜಾಲ ಎಷ್ಟೊಂದು ದೊಡ್ಡದಾಗಿದೆ ಎಂಬುದಕ್ಕೆ ಸಾಕ್ಷಿ. ಇಂತಹ ನಕಲಿ ಕಾರ್ಡ್ಗಳಿಂದ ₨ 1300 ಕೋಟಿಯಷ್ಟು ಸಬ್ಸಿಡಿ ಪೋಲಾಗಿರುವುದು ಆತಂಕದ ಸಂಗತಿ.
ಕಡುಬಡವರನ್ನು ತಲುಪಬೇಕಾದ ಯೋಜನೆಗಳ ಉದ್ದೇಶವೇ ಇದರಿಂದ ವಿಫಲವಾಗುತ್ತದೆ. ಅಕ್ರಮ ಪಡಿತರ ಕಾರ್ಡ್ಗಳನ್ನು ಪತ್ತೆ ಮಾಡಲು ಬಿಪಿಎಲ್ ಕಾರ್ಡ್ನಲ್ಲಿ ಇಡೀ ಕುಟುಂಬ ಸದಸ್ಯರ ಫೋಟೊ ಹಾಕುವ ಪದ್ಧತಿ ಈ ಹಿಂದೆ ಆರಂಭವಾಯಿತು. ಆ ನಂತರ ಇನ್ನೂ ಹೆಚ್ಚು ಪರಿಣಾಮಕಾರಿ ಎಂಬಂಥ ಬಯೊಮೆಟ್ರಿಕ್ ಪದ್ಧತಿ ಶುರುವಾಯಿತು. ಆದರೆ ಬಯೊಮೆಟ್ರಿಕ್ ವ್ಯವಸ್ಥೆಯೂ ಫಲ ಕೊಟ್ಟಿಲ್ಲದಿರುವುದು ಅಚ್ಚರಿಯ ಸಂಗತಿ. ಕೆಲವರ ಬೆರಳಿನ ಮುದ್ರೆಗಳು ನಾಲ್ಕಕ್ಕಿಂತ ಅಧಿಕ ಕಾರ್ಡ್ಗಳಲ್ಲಿ ಕಂಡು ಬಂದಿರುವುದು ಯೋಜನೆ ಅನುಷ್ಠಾನದಲ್ಲಿನ ವೈಫಲ್ಯವನ್ನು ಎತ್ತಿ ಹೇಳುತ್ತದೆ.
ಬಿಪಿಎಲ್ ಕುಟುಂಬಗಳನ್ನು ಗುರುತಿಸುವ ಕೆಲಸ ಪಾರದರ್ಶಕವಾಗ ದಿದ್ದಲ್ಲಿ ದುರುಪಯೋಗವನ್ನು ತಡೆಯುವುದು ಕಷ್ಟ. ಕಡು ಬಡವರನ್ನು ಗುರುತಿಸುವ ಜವಾಬ್ದಾರಿ ಗ್ರಾಮಸಭೆಗಳಿಗೆ ನೀಡಬೇಕೆಂದು ಈ ಹಿಂದೆ ಸಲಹೆ ಮಾಡಲಾಗಿತ್ತು. ಅದನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಹೆಚ್ಚುವರಿ ಕಾರ್ಡ್ಗಳನ್ನು ಪಡೆದುಕೊಂಡಿರುವವರಲ್ಲಿ ಶ್ರೀಮಂತರು, ರಾಜಕೀಯ ಕೃಪಾಶ್ರಯ ಪಡೆದವರು ಸೇರಿರುವುದು ಗುಟ್ಟಾಗಿ ಉಳಿದಿಲ್ಲ. ಪಡಿತರ ಕಾರ್ಡ್ಗಳ ವಿತರಣೆ ವ್ಯವಸ್ಥೆಯಲ್ಲಿಯೇ ಸಮಸ್ಯೆ ಇದೆ.
ಇದಕ್ಕಾಗಿ ಅಕ್ರಮ ಎಸಗಿದ ಆಹಾರ ನಿರೀಕ್ಷಕರು, ನ್ಯಾಯಬೆಲೆ ಅಂಗಡಿಗಳ ಮಾಲೀಕರನ್ನು ಕಾನೂನಿನ ಕಟಕಟೆಗೆ ಎಳೆಯಲು ಸರ್ಕಾರ ಮುಂದಾಗಿರುವುದು ಸರಿ. ಆದರೆ ಶಾಸಕರು, ಅವರ ಸಮೀಪವರ್ತಿಗಳು, ಸ್ಥಳೀಯ ರಾಜಕಾರಣಿಗಳು ಅಥವಾ ಪುಢಾರಿಗಳ ಒತ್ತಡದಿಂದಲೂ ಯಾರು ಯಾರಿಗೋ ಕಾರ್ಡ್ಗಳು ವಿತರಣೆ ಯಾಗುತ್ತವೆ ಎಂಬುದನ್ನೂ ಮರೆಯಬಾರದು. ಕಾರ್ಡ್ಗಳ ಹಂಚಿಕೆಯಲ್ಲಿ ಸ್ಥಳೀಯ ಪುಢಾರಿಗಳನ್ನು ದೂರವಿಟ್ಟಲ್ಲಿ ಬಹಳಷ್ಟು ಸಮಸ್ಯೆ ಪರಿಹಾರವಾಗುತ್ತದೆ. ಈ ನಿಟ್ಟಿನಲ್ಲಿಯೂ ಸರ್ಕಾರ ದಿಟ್ಟತನ ಪ್ರದರ್ಶಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.