ಬೆಂಗಳೂರು: ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ಕಳಪೆ ಬೆಡ್ಶೀಟ್ಮತ್ತು ಹೊದಿಕೆಗಳನ್ನು ಮಾರಾಟ ಮಾಡುತ್ತಿದ್ದ, ಎರಡು ಅಂಗಡಿಗಳ ಮೇಲೆ ಮಂಗಳವಾರ ದಾಳಿ ನಡೆಸಿದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ.
ಉಪ್ಪಾರಪೇಟೆಯ ಬ್ಯಾಂಕ್ ಬಂಡ್ ರಸ್ತೆಯಲ್ಲಿ ಹರಿಯಾಣ ಹ್ಯಾಂಡ್ಲೂಮ್ ಅಂಗಡಿ ಇಟ್ಟುಕೊಂಡಿದ್ದ ಪರ್ಮಿಂದರ್ ಸಿಂಗ್(37) ಮತ್ತು ಮಲ್ಲೇಶ್ವರದ ಕಮಲ್ ಹ್ಯಾಂಡ್ಲೂಮ್ ಅಂಗಡಿಯ ದರ್ಶನ್ (47) ಬಂಧಿತರು. ಆರೋಪಿಗಳಿಂದ ₨1 ಲಕ್ಷ ಮೌಲ್ಯದ ಬೆಡ್ಶೀಟ್ಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳು ಹರಿಯಾಣದಲ್ಲಿ ಬೆಡ್ಶೀಟ್ ಮತ್ತು ಹೊದಿಕೆಗಳನ್ನು ಖರೀದಿಸಿ, ನಗರಕ್ಕೆ ತರುತ್ತಿದ್ದರು. ನಂತರ ಅವುಗಳಿಗೆ ಪ್ರತಿಷ್ಠಿತ ಕಂಪೆನಿಗಳ ಚಿಹ್ನೆಗಳನ್ನು ಅಂಟಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಗ್ರಾಹಕರನ್ನು ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದರು.