ನವದೆಹಲಿ(ಪಿಟಿಐ): ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಹೀನಾಯ ಸೋಲು ಅನುಭವಿಸಿರುವ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಪುನರ್ ಸಂಘಟಿಸಲು ನಡೆಯಲಿರುವ ಸಾಂಸ್ಥಿಕ ಚುನಾವಣೆ ವೇಳೆ ನಕಲಿ ಸದಸ್ಯರನ್ನು ಕೈಬಿಡುವಂತೆ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಸಲಹೆ ಮಾಡಿದ್ದಾರೆ.
ಪಕ್ಷದ ಸಾಂಸ್ಥಿಕ ಚುನಾವಣೆಗಳು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿರಬೇಕು ಹಾಗೂ ನಕಲಿ ಸದಸ್ಯರಿಗೆ ಮತ ಚಲಾಯಿಸಲು ಅವಕಾಶ ನೀಡಬಾರದು ಎಂದು ಸೂಚಿಸಿದ್ದಾರೆ. ಪಕ್ಷದ ಆಂತರಿಕ ಚುನಾವಣೆಗಳನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಎಲ್ಲ ಅಧಿಕಾರವನ್ನು ಎಂ. ರಾಮಚಂದ್ರನ್ ನೇತೃತ್ವದ ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರಕ್ಕೆ ನೀಡಲಾಗಿದೆ ಎಂದರು.
ನಗರದಲ್ಲಿ ಸೋಮವಾರ ನಡೆದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಅವರು, ನಕಲಿ ಮತದಾನ ತಡೆಯಲು ಸದಸ್ಯರಿಗೆ ಗುರುತಿನ ಚೀಟಿ ನೀಡುವುದು ಸೇರಿದಂತೆ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲಾಗುವುದು ಎಂದರು.
ಪಕ್ಷದ ಸದಸ್ಯತ್ವ ಅಭಿಯಾನ ಡಿಸೆಂಬರ್ನಲ್ಲಿ ಮುಕ್ತಾಯವಾಗಲಿದ್ದು ವರ್ಷಾರಂಭದಿಂದ ಬ್ಲಾಕ್ ಮಟ್ಟದ ಚುನಾವಣೆ ಆರಂಭವಾಗಲಿದೆ. ಜುಲೈನಲ್ಲಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆಯಲಿದೆ.