ಗಂಗಾವತಿ: ನಗರಸಭೆ ಅಧ್ಯಕ್ಷ ಶಾಮೀದ ಮನಿಯಾರ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ 23ನೇ ವಾರ್ಡಿನ ಸದಸ್ಯ ಕೆ.ವೆಂಕಟೇಶ ಅವಿರೋಧ ಆಯ್ಕೆಯಾದರು.
ಚುನಾವಣೆಯಲ್ಲಿ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದು, ಚುನಾವಣಾಧಿಕಾರಿ ಪಿ.ಎಸ್.ಮಂಜುನಾಥ ಅವಿರೋಧ ಆಯ್ಕೆ ಘೋಷಿಸಿದರು.
ನಗರಸಭೆಯ ಮೊದಲ ಅವಧಿಯ 30 ತಿಂಗಳಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಎಸ್ಟಿ ಪಂಗಡಕ್ಕೆ ಮೀಸಲಾಗಿತ್ತು. 16 ತಿಂಗಳು ಶಾಮೀದ ಮನಿಯಾರ ಅಧಿಕಾರ ನಿರ್ವಹಿಸಿದ್ದರು.
ಸದಸ್ಯರಿಗೆ ವಿಪ್: ನಗರಸಭೆಯ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅಕಾಂಕ್ಷಿಗಳನ್ನು ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಸೆಳೆಯಲು ಯತ್ನಿಸಿವೆ ಎಂಬ ಮಾಹಿತಿ ಕಾರಣಕ್ಕೆ, ಶಾಸಕ ಅನ್ಸಾರಿ ಮಂಗಳವಾರ ಸಂಜೆ ಎಲ್ಲ ಸದಸ್ಯರನ್ನು ತಮ್ಮ ನಿವಾಸಕ್ಕೆ ಕರೆಸಿ ವಿಪ್ ಜಾರಿ ಮಾಡಿದ್ದರು ಎನ್ನಲಾಗಿದೆ.