ಬೆಂಗಳೂರು: ರಸ್ತೆ ಪಕ್ಕದಲ್ಲೇ ಉಳಿದ ಕಸದ ರಾಶಿ, ರಾಡಿ ಎದ್ದ ರಸ್ತೆಗಳು, ಹೂಳು ತುಂಬಿ ಮುಚ್ಚಿ ಹೋದ ಚರಂಡಿಗಳು, ಕಸದಿಂದ ತುಂಬಿಹೋದ ಕಾಲುವೆಗಳು...
ಮಳೆಯಿಂದಾಗಿ ಉಂಟಾಗಿರುವ ಅವಾಂತರಗಳ ಬಗ್ಗೆ ತಿಳಿಯಲು ಶನಿವಾರ ಪರಿವೀಕ್ಷಣೆ ನಡೆಸಿದ ನಗರಾಭಿವೃದ್ಧಿ ಸಚಿವ ಆರ್.ರೋಷನ್ ಬೇಗ್ ಅವರನ್ನು ಎದುರುಗೊಂಡ ದೃಶ್ಯಗಳಿವು.
ತಾವು ಪ್ರತಿನಿಧಿಸುವ ಶಿವಾಜಿನಗರ ಕ್ಷೇತ್ರದ ಜನರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಸಚಿವರು ಕಣ್ಣಾರೆ ಕಂಡರು.
ಶಿವಾಜಿನಗರದ ನಾಲಾ ರಸ್ತೆ ಯುದ್ದಕ್ಕೂ ಅಲ್ಲಲ್ಲಿ ಕಸದ ರಾಶಿಗಳನ್ನು ಕಂಡು ಸಚಿವರು ಹೌಹಾರಿದರು. ಜ್ಯುವೆಲ್ಲರ್ಸ್ ಸ್ಟ್ರೀಟ್ ಬಳಿಯ ನಾಲ್ಕೈದು ದಿನಗಳಿಂದ ಕಸವನ್ನು ತೆರವುಗೊಳಿಸಿರಲಿಲ್ಲ. ವಾರ್ಡ್ನ ಎಂಜಿನಿಯರ್ ಅನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಗಾಂಧಿ ಗ್ರಾಮದ ಪೌಲ್ಟ್ರಿ ರಸ್ತೆಯ ಪಕ್ಕದ ಕಾಲುವೆಯಲ್ಲಿ ಕಸ ರಾಶಿ ಹಾಕಿದ್ದರಿಂದ ನೀರು ಸಹಜವಾಗಿ ಹರಿಯಲು ಅಡ್ಡಿ ಉಂಟಾಗಿತ್ತು.
ಹಲಸೂರು ಕೆರೆಯ ಬಳಿ ಕಾಲುವೆಯಲ್ಲಿ ಥರ್ಮಾಕೋಲ್ ಪೆಟ್ಟಿಗೆಗಳ ರಾಶಿಯೇ ಕಂಡುಬಂತು.
ಕಂಟೋನ್ಮೆಂಟ್ ರೈಲು ನಿಲ್ದಾಣ ಸಮೀಪದ ಕೆಳಸೇತುವೆ ಕೆಳಗಿರುವ ಚರಂಡಿಯಲ್ಲಿ ಹೂಳು ತುಂಬಿದೆ. ಇದರಲ್ಲಿ ನೀರು ಹರಿಯುವುದಿಲ್ಲ. ಹಾಗಾಗಿ ಇಲ್ಲಿ ಸ್ವಲ್ಪ ಮಳೆ ಬಂದರೂ ರಸ್ತೆ ಯಲ್ಲೇ ನೀರು ಹರಿಯುತ್ತದೆ ಎಂದು ಸ್ಥಳೀಯರು ದೂರಿದರು. ಹೂಳನ್ನು ತೆರವುಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.