ಚಂಡೀಗಡ(ಪಿಟಿಐ): ಬಾಲಿವುಡ್ ನಟ ಅಮೀರ್ ಖಾನ್ ಅವರಿಗೆ ಇಲ್ಲಿನ ಸಿವಿಲ್ ಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ಖಾಸಗಿ ವಾಹಿನಿಯಲ್ಲಿ ಅಮೀರ್ಖಾನ್ ನಡೆಸಿಕೊಡುವ ‘ಸತ್ಯಮೇವ ಜಯತೆ’ ಕಾರ್ಯಕ್ರಮದಲ್ಲಿ ಸಲಿಂಗಕಾಮದ ಬಗ್ಗೆ ಪ್ರಚಾರ ಮಾಡಿದ್ದಾರೆ ಎಂದು ದೂರಿ ಅವರ ವಿರುದ್ಧ ದೂರು ಸಲ್ಲಿಸಲಾಗಿತ್ತು. ಡಿ.19ರ ಒಳಗಾಗಿ ಉತ್ತರ ನೀಡುವಂತೆ ಕೋರ್ಟ್ ತಿಳಿಸಿದೆ.
ವಕೀಲೆ ಮನ್ದೀಪ್ ಕೌರ್ ಅಮೀರ್ ವಿರುದ್ಧ ಸಲ್ಲಿಸಿದ್ದ ಅರ್ಜಿಗೆ ಸಿವಿಲ್ ಕೋರ್ಟ್ ನ್ಯಾಯಾಧೀಶ ಜಸ್ವಿಂದರ್ ಸಿಂಗ್ ನೋಟಿಸ್ ಜಾರಿ ಮಾಡಿದ್ದಾರೆ. ಅಮೀರ್ಖಾನ್ ತಮ್ಮ ಕಾರ್ಯ ಕ್ರಮದಲ್ಲಿ ಸಲಿಂಗ ಕಾಮದ ಬಗ್ಗೆ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಕೌರ್ ತಮ್ಮ ಅರ್ಜಿಯಲ್ಲಿ ದೂರಿದ್ದಾರೆ.
ಅ.19 ರಂದು ಪ್ರಸಾರವಾಗಿದ್ದ ಕಾರ್ಯಕ್ರಮದಲ್ಲಿ, ಅಮೀರ್್ ಖಾನ್ ಸಲಿಂಗಿಗಳ ಜೀವನಶೈಲಿ ಮತ್ತು ಹಕ್ಕು ಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟವಾದ ನಿರ್ದೇ ಶನಗಳನ್ನು ನೀಡಿದ್ದರೂ ಉಲ್ಲಂಘಿಸಿದ್ದಾರೆ ಎಂದು ಕೌರ್ ಹೇಳಿದ್ದಾರೆ.
ಗಂಡು ಸಲಿಂಗಿ ಮತ್ತು ಹೆಣ್ಣು ಸಲಿಂಗಿ ಕಾನೂನು ಬಾಹಿರ ಎಂಬ ಐಪಿಸಿ 377 ವಿಧಿಗೆ ತಿದ್ದುಪಡಿಗಳನ್ನು ತರಲು ಸಾರ್ವಜನಿಕರು ಮತ ಹಾಕುವಂತೆ ಅಮೀರ್ ಮನವಿ ಮಾಡಿದ್ದರು ಎಂದು ಅವರು ದೂರಿದ್ದಾರೆ.