ಬೆಂಗಳೂರು: ‘ನಾವೆಲ್ಲ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತೇವೆ. ಆದರೆ ಕೆ.ಸಿ.ರೆಡ್ಡಿಯವರು ದೇಶದ ಮೇಲಿನ ಅಪಾರವಾದ ಕಾಳಜಿಯಿಂದ ರಾಜಕಾರಣ ಮಾಡಿದ್ದರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಶುಕ್ರವಾರ ‘ಮಹಾನ್ ಸಾಧಕ ಕೆ.ಸಿ.ರೆಡ್ಡಿ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ದೇಶವನ್ನು ಪರಕೀಯರ ಸಂಕೋಲೆಯಿಂದ ಬಿಡಿಸಿ ಸ್ವಾತಂತ್ರ್ಯದ ರುಚಿಯನ್ನು ಅನುಭವಿಸಬೇಕು ಎಂಬ ಏಕೈಕ ಉದ್ದೇಶದಿಂದ ಮಹಾತ್ಮ ಗಾಂಧೀಜಿಯವರ ಜೊತೆ ಸೇರಿ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದರು. ಅದರ ಫಲವನ್ನು ನಾವೀಗ ಅನುಭವಿಸುತ್ತಿದ್ದೇವೆ’ ಎಂದು ಅವರು ಹೇಳಿದರು.
ಸಾಮಾನ್ಯವಾಗಿ ಬಡ ಕುಟುಂಬದಿಂದ ಬಂದವರಲ್ಲಿ ಹೋರಾಟದ ಕಿಚ್ಚು ಇರುತ್ತದೆ. ಆದರೆ ರೆಡ್ಡಿಯವರು ಜಮೀನ್ದಾರ ಕುಟುಂಬದಿಂದ ಬಂದವರು. ಆದರೆ ಶ್ರೀಮಂತಿಕೆಯ ಹಿಂದೆ ಹೋಗದೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಮೂರು ಸಲ ಸೆರೆವಾಸ ಅನುಭವಿಸಿದ್ದರು. ಇಂಥ ನಿಸ್ವಾರ್ಥ ರಾಜಕಾರಣಿಯ ಬದುಕು ಇಂದಿನ ರಾಜಕಾರಣಿಗಳಲ್ಲಿ ಸ್ವಲ್ಪವಾದರೂ ಬದಲಾವಣೆ ತಂದರೆ ಅದೇ ಅವರಿಗೆ ನೀಡುವ ಗೌರವ ಎಂದರು.
ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಸಚಿವರಾದ ರಾಮಲಿಂಗಾರೆಡ್ಡಿ, ಡಿ.ಕೆ.ಶಿವಕುಮಾರ್, ಕೃಷ್ಣಭೈರೇಗೌಡ, ಯು.ಟಿ.ಖಾದರ್, ರಾಜ್ಯಸಭಾ ಸದಸ್ಯ ಎಂ.ವಿ.ರಾಜೀವ್ಗೌಡ, ವಿಧಾನಸಭೆ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರ ರೆಡ್ಡಿ ಮತ್ತು ಕೆ.ಸಿ.ರೆಡ್ಡಿ ಕುಟುಂಬದವರು ಉಪಸ್ಥಿತರಿದ್ದರು.
ಕೆ.ಸಿ.ರೆಡ್ಡಿ ಸ್ಮಾರಕ ಭವನಕ್ಕೆ ಒತ್ತಾಯ
ಸಂಸದ ಕೆ.ಎಚ್ ಮುನಿಯಪ್ಪ ಮಾತನಾಡಿ ಕೆ.ಸಿ.ರೆಡ್ಡಿಯವರು ಮೈಸೂರು ರಾಜ್ಯಕ್ಕೆ ಮೊದಲ ಬಾರಿಗೆ ಪಂಚವಾರ್ಷಿಕ ಯೋಜನೆ ತಂದವರು. ಬೃಹತ್ ಕೈಗಾರಿಕೆಗಳನ್ನು ರಾಜ್ಯಕ್ಕೆ ತಂದವರು. ಅವರ ಸಾಧನೆಗಳನ್ನು ಇಂದಿನ ಯುವಕರಿಗೆ ನೆನಪಿಸುವ ನಿಟ್ಟಿನಲ್ಲಿ ಸ್ಮಾರಕ ಭವನ ನಿರ್ಮಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.