ನವದೆಹಲಿ (ಪಿಟಿಐ): ‘ಮೋದಿ ನೇತೃತ್ವದ ಸರ್ಕಾರದಲ್ಲಿ ಯಾವೊಬ್ಬ ಸಚಿವರೂ ‘ಅಶಕ್ತ’ರಾಗಿಲ್ಲ ಮತ್ತು ಕಡಿಮೆ ಮಾತು ಹಾಗೂ ಹೆಚ್ಚು ಕೆಲಸ ಎಂಬ ತತ್ವದಲ್ಲಿ ನಮ್ಮೆಲ್ಲರಿಗೂ ನಂಬಿಕೆ ಇದೆ’ ಎಂದು ಗೃಹ ಸಚಿವ ರಾಜ್ನಾಥ್ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.
ನಮ್ಮಲ್ಲಿ ಎಲ್ಲರೂ ಸಶಕ್ತರಾಗಿದ್ದಾರೆ. ನಾವು ಕಡಿಮೆ ಮಾತನಾಡಿ ಹೆಚ್ಚು ಕೆಲಸ ಮಾಡುತ್ತೇವೆ ಎಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಅವರು, ನೀವು ಈ ರೀತಿ ಏಕೆ ಯೋಚಿಸುವಿರಿ?’ ಎಂದು ಪ್ರಶ್ನಿಸಿದ್ದಾರೆ.
ಮೋದಿ ಸರ್ಕಾರದಲ್ಲಿ ಸಚಿವರು ಯಾವುದಾದರೂ ಅಧಿಕಾರದಿಂದ ವಂಚಿತರಾಗಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಸಿಂಗ್ ಈ ರೀತಿ ಉತ್ತರಿಸಿದ್ದಾರೆ.
ಸರ್ಕಾರದ ಆಡಳಿತ ವ್ಯವಸ್ಥೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಿದ ಅವರು ದುರ್ಬಲ ಆಡಳಿತದಿಂದ ಒಳ್ಳೆಯ ಕಾರ್ಯಗಳನ್ನು ಸಾಧಿಸಲು ಆಗುವುದಿಲ್ಲ ಎಂದಿದ್ದಾರೆ.
‘ಆಡಳಿತ ವ್ಯವಸ್ಥೆಯು ಸದೃಢ ಹಾಗೂ ಪರಿಣಾಮಕಾರಿಯಾಗಿರಬೇಕು. ಈ ವರೆಗೆ ಇಂತಹ ಯಾವುದೇ ತೊಂದರೆ ಉಂಟಾಗಿಲ್ಲ, ಹಾಗೆ ಮುಂದೆ ಕೂಡ ಇರುವುದಿಲ್ಲ. ಈಗ ಅದು ಕೇವಲ ಇತಿಹಾಸ ಮಾತ್ರ’ ಎಂದು ಅವರು ಪ್ರತಿಕ್ರಯಿಸಿದ್ದಾರೆ.
ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಅಭಿವೃದ್ಧಿಯ ಉದ್ದೇಶದೊಂದಿಗೆ ಮುಂದುವರೆಯುತ್ತಿದೆ ಎಂದಿದ್ದಾರೆ.