ನವದೆಹಲಿ (ಐಎಎನ್ಎಸ್): ಕೇಂದ್ರ ಸರ್ಕಾರ ಸ್ವಾಮ್ಯದ 79 ಉದ್ಯಮಗಳು (ಸಿಪಿಎಸ್ಯು) ನಷ್ಟದಲ್ಲಿದ್ದು, ಅವುಗಳಲ್ಲಿ 48 ಉದ್ಯಮಗಳ ಪುನಶ್ಚೇತನಕ್ಕೆ ₨40,937 ಕೋಟಿ ವ್ಯಯಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ರಾಜ್ಯಸಭೆಗೆ ಮಾಹಿತಿ ನೀಡಿದರು.
ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು ‘ಸಿಪಿಎಸ್ಇ’ಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.
79 ‘ಸಿಪಿಎಸ್ಯು’ಗಳಿಗೆ ಸರ್ಕಾರ ಈಗಾಗಲೇ ₨1.57 ಲಕ್ಷ ಕೋಟಿ ಬಂಡವಾಳ ಒದಗಿಸಿದೆ. ಹೀಗಿದ್ದರೂ 49 ಉದ್ಯಮಗಳು ರೋಗಗ್ರಸ್ತವಾಗಿದೆ. 4 ಉದ್ಯಮಗಳು ಮುಚ್ಚುವ ಹಂತಕ್ಕೆ ತಲುಪಿವೆ ಎಂದು ವಿವರಿಸಿದರು.
ಇಂದಿನ ಸ್ಪರ್ಧಾತ್ಮಕ ವಾತಾವರಣದಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ಯಮಗಳು ಹೆಚ್ಚಿನ ವೃತ್ತಿಪರತೆ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಜೇಟ್ಲಿ ಇದೇ ವೇಳೆ ಅಭಿಪ್ರಾಯಪಟ್ಟರು.