ಬೆಂಗಳೂರು: ಅಪರಾಧ ಕೃತ್ಯಗಳ ನಿಯಂತ್ರಣ ಸಂಬಂಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೇಂದ್ರ ಅಪರಾಧ ವಿಭಾಗವು (ಸಿಸಿಬಿ) ಇದೇ ಮೊದಲ ಬಾರಿಗೆ ನಗರದಲ್ಲಿ ‘ಸುರಕ್ಷತಾ ಸಾಧನಾ ಮತ್ತು ಸಲಕರಣೆ’ ವಸ್ತು ಪ್ರದರ್ಶನ ಆಯೋಜಿಸಿದೆ.
ರಾಜಾಜಿನಗರದ ಒರಾಯನ್ ಮಾಲ್ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನಕ್ಕೆ, ಚಿತ್ರನಟಿ ರಾಗಿಣಿ ದ್ವಿವೇದಿ ಅವರು ಶುಕ್ರವಾರ ಚಾಲನೆ ನೀಡಿದರು. ಪ್ರದರ್ಶನವು ಶನಿವಾರ ಅಂತ್ಯಗೊಳ್ಳಲಿದೆ.
‘ಲೈಂಗಿಕ ದೌರ್ಜನ್ಯ, ಅತ್ಯಾಚಾರ, ದರೋಡೆ, ಕೊಲೆ ಯತ್ನ ಸೇರಿದಂತೆ ಅಪರಾಧ ಕೃತ್ಯಗಳ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಈ ಪ್ರದರ್ಶನ ವೇದಿಕೆಯಾಗಲಿದೆ. 24 ವಿವಿಧ ಸುರಕ್ಷತಾ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಸಿಸಿಬಿ ಡಿಸಿಪಿ ಅಭಿಷೇಕ್ ಗೋಯಲ್ ಮನವಿ ಮಾಡಿದರು.
ಆ್ಯಪ್ನಿಂದ ಅಪಘಾತದ ಮಾಹಿತಿ: ಅಪಘಾತ ಸಂಭವಿಸಿದಾಗ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ಪ್ರಾಣಹಾನಿ ಆಗುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಖಾಸಗಿ ಕಂಪೆನಿಯ ಉದ್ಯೋಗಿಗಳಾದ ವಿನೋದ್ ಮತ್ತು ರಾಜೇಶ್ ‘mishapp’ ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ.
‘ರಸ್ತೆ ಅಪಘಾತ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಮೊಬೈಲ್ ಕೆಳಗೆ ಬೀಳುವುದು ಸಾಮಾನ್ಯ. ಹಾಗೆ ಮೊಬೈಲ್ ಬಿದ್ದಾಗ ವ್ಯಕ್ತಿಯ ಕುಟುಂಬಕ್ಕೆ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ. ಕೂಡಲೇ ಅವರು ಆತನಿಗೆ ಕರೆ ಮಾಡಬಹುದು. ಪ್ರತಿಕ್ರಿಯೆ ಸಿಗದಿದ್ದಾಗ ಜಿಪಿಎಸ್ ವ್ಯವಸ್ಥೆ ಮೂಲಕ ಯಾವ ಸ್ಥಳದಲ್ಲಿದ್ದಾನೆ ಎಂಬುದನ್ನು ಪತ್ತೆ ಮಾಡಿ, ಹತ್ತಿರದ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಬಹುದು. ಸ್ಮಾರ್ಟ್ ಫೋನ್ನಲ್ಲಿ ಪ್ಲೇಸ್ಟೋರ್ಗೆ ಹೋಗಿ, ‘mishapp’ ಡೌನ್ಲೋಡ್ ಮಾಡಿಕೊಳ್ಳಬೇಕು’ ಎನ್ನುತ್ತಾರೆ ವಿನೋದ್.