ಗಾಂಧಿನಗರ (ಪಿಟಿಐ): ಗುಜರಾತ್ನ ಗೋಧ್ರಾದಲ್ಲಿ ೨೦೦೨ರಲ್ಲಿ ನಡೆದ ರೈಲು ದುರಂತ ಹಾಗೂ ಅದಕ್ಕೆ ಪ್ರತೀಕಾರವಾಗಿ ನಡೆದ ಕೋಮು ಗಲಭೆಗಳ ತನಿಖೆಗೆ ನೇಮಿಸಲಾಗಿದ್ದ ನ್ಯಾ.ನಾನಾವತಿ ಆಯೋಗವು ಮುಖ್ಯಮಂತ್ರಿ ಆನಂದಿಬೆನ್್ ಪಟೇಲ್್ ಅವರಿಗೆ ಮಂಗಳವಾರ ಕೊನೆಗೂ ಅಂತಿಮ ವರದಿ ಸಲ್ಲಿಸಿದೆ.
ಈ ಗಲಭೆ ನಡೆದು ೧೨ ವರ್ಷಗಳ ಬಳಿಕ ಅಂತಿಮ ವರದಿ ಸಲ್ಲಿಕೆಯಾಗಿದೆ. ತನಿಖೆ ಪೂರ್ಣಗೊಳಿಸಲು ಆಯೋಗದ ಅವಧಿಯನ್ನು ೨೪ ಬಾರಿ ವಿಸ್ತರಿಸಲಾಗಿತ್ತು. ‘೨,೦೦೦ ಪುಟಗಳ ಅಂತಿಮ ವರದಿ ಸಲ್ಲಿಸಿದ್ದೇವೆ’ ಎಂದು ಸುದ್ದಿಸಂಸ್ಥೆಗೆ ತಿಳಿಸಿರುವ ಆಯೋಗದ ಅಧ್ಯಕ್ಷ ನ್ಯಾ. ಜಿ.ಟಿ.ನಾನಾವತಿ, ವರದಿಯಲ್ಲಿ ಏನಿದೆ ಎನ್ನುವುದನ್ನು ಬಹಿರಂಗಪಡಿಸಿಲ್ಲ.
೨೦೦೨ರ ಫೆಬ್ರುವರಿ ೨೭ರ ರೈಲು ದುರಂತಕ್ಕೆ ಪ್ರತೀಕಾರವಾಗಿ ನಡೆದ ಗಲಭೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ರೈಲು ದುರಂತದಲ್ಲಿ ೫೯ ಮಂದಿ ಸಾವನ್ನಪ್ಪಿದ್ದರು. ಗೋಧ್ರಾ ರೈಲು ದುರಂತ ಹಾಗೂ ಆ ಬಳಿಕ ನಡೆದ ಗಲಭೆ ಪ್ರಕರಣಗಳನ್ನು ತನಿಖೆಗೆ ಒಳಪಡಿಸಲು ಗುಜರಾತ್್ ಸರ್ಕಾರ ೨೦೦೨ರ ಮಾರ್ಚ್್ ೩ರಂದು ಈ ಆಯೋಗ ರಚಿಸಿತ್ತು. ನ್ಯಾ.ಕೆ.ಜಿ.ಷಾ ಇದರ ಸದಸ್ಯರಾಗಿದ್ದರು.
ಅದೇ ವರ್ಷ ಮೇ ತಿಂಗಳಿನಲ್ಲಿ ಜಿ.ಟಿ.ನಾನಾವತಿ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿತು. ಆರಂಭದಲ್ಲಿ, ಸಬರಮತಿ ಎಕ್ಸ್ಪ್ರೆಸ್್ ರೈಲಿನ ಎಸ್್–೬ ಬೋಗಿಯಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಕಾರಣವಾದ ಅಂಶಗಳು, ಸನ್ನಿವೇಶ ಹಾಗೂ ಘಟನಾವಳಿಗಳನ್ನು ತನಿಖೆಗೆ ಒಳಪಡಿಸುವಂತೆ ಆಯೋಗಕ್ಕೆ ಸೂಚಿಸಲಾಗಿತ್ತು. ನಂತರದಲ್ಲಿ ವಿಚಾರಣೆಗೆ ಸೂಚಿಸಲಾದ ವಿಷಯಗಳನ್ನು (ಟಿಒಆರ್) ತಿದ್ದುಪಡಿ ಮಾಡಲಾಯಿತು. ರೈಲು ದುರಂತದ ಬಳಿಕ ನಡೆದ ಗಲಭೆ ಪ್ರಕರಣವನ್ನೂ ತನಿಖೆಗೆ ಒಳಪಡಿಸುವಂತೆ ಆಯೋಗಕ್ಕೆ ಸೂಚಿಸಲಾಯಿತು.
೨೦೦೮ರಲ್ಲಿ ಕೆ.ಜಿ.ಷಾ ಮೃತಪಟ್ಟ ಕಾರಣ ಹೈಕೋರ್ಟ್್ ನಿವೃತ್ತ ನ್ಯಾಯಮೂರ್ತಿ ಅಕ್ಷಯ್್ ಮೆಹ್ತಾ ಅವರನ್ನು ಆಯೋಗಕ್ಕೆ ನೇಮಕ ಮಾಡಲಾಯಿತು. ಆಯೋಗಕ್ಕೆ ನೀಡಲಾಗಿದ್ದ ‘ಟಿಒಆರ್’ ಅನ್ನು ೨೦೦೪ರಲ್ಲಿ ತಿದ್ದುಪಡಿ ಮಾಡಿ ಗೋಧ್ರಾ ರೈಲು ದುರಂತ ಮತ್ತು ನಂತರದ ಗಲಭೆಯಲ್ಲಿ ಅಂದಿನ ಗುಜರಾತ್್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಅವರ ಸಂಪುಟದ ಇತರ ಸಚಿವರು ಅಥವಾ ಯಾವುದೇ ಅಧಿಕಾರಿಗಳ ಕೈವಾಡ ಇದೆಯೇ ಎನ್ನುವುದನ್ನು ವಿಚಾರಣೆ ಮಾಡುವಂತೆಯೂ ಸೂಚಿಸಲಾಗಿತ್ತು.
ಗೋಧ್ರಾ ರೈಲು ದುರಂತದ ಬಗ್ಗೆ ೨೦೦೮ರಲ್ಲಿ ಆಯೋಗವು ೧೬೮ ಪುಟಗಳ ಮೊದಲ ವರದಿ ಸಲ್ಲಿಸಿತ್ತು. ಗೋಧ್ರಾ ರೈಲು ನಿಲ್ದಾಣದ ಬಳಿ ಸಬರಮತಿ ಎಕ್ಸ್ಪ್ರೆಸ್್ ರೈಲಿನ ಎಸ್್–೬ ಬೋಗಿಯಲ್ಲಿ ಸಂಭವಿಸಿದ ಅಗ್ನಿ ದುರಂತವು ‘ವ್ಯವಸ್ಥಿತ ಪಿತೂರಿ’ ಎಂದು ವರದಿಯಲ್ಲಿ ಹೇಳಲಾಗಿತ್ತು.
ಆಯೋಗವು ಸುಮಾರು ೪೬,೫೦೦ ದಾಖಲೆಗಳು, ಹಲವು ಪ್ರಮಾಣಪತ್ರಗಳು, ಅಧಿಕಾರಿಗಳ ಮತ್ತು ಸಾರ್ವಜನಿಕರ ಹೇಳಿಕೆಗಳನ್ನು ಪಡೆದುಕೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.