ಭುವನೇಶ್ವರ: ತುರ್ತು ಪರಿಸ್ಥಿತಿ ಹಾಗೂ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಎದುರಾಗುವ ಇಂಧನ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಾಲ್ಕು ಹೊಸ ತೈಲ ಸಂಗ್ರಹಗಾರ ಸ್ಥಾಪಿಸಲು ನಿರ್ಧರಿಸಿದೆ.
ಕರ್ನಾಟಕ, ರಾಜಸ್ತಾನ, ಗುಜರಾತ್ ಮತ್ತು ಒಡಿಶಾದಲ್ಲಿ ತಲಾ ಒಂದರಂತೆ ಒಟ್ಟು ನಾಲ್ಕು ತೈಲಾಗಾರಗಳನ್ನು ಸ್ಥಾಪಿಸಲಾಗುವುದು ಎಂದು ತೈಲ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೆಂದ್ರ ಪ್ರಧಾನ್ ಶುಕ್ರವಾರ ತಿಳಿಸಿದ್ದಾರೆ.
ಅಂದಾಜು 3800 ಕೋಟಿ ರೂಪಾಯಿ ವೆಚ್ಚದಲ್ಲಿ ನೆಲದಡಿ ನಿರ್ಮಿಸಲಾಗುವ ನಾಲ್ಕು ತೈಲಾಗಾರಗಳ ಪೈಕಿ 375 ಲಕ್ಷ ಟನ್ ಕಚ್ಚಾತೈಲ ಸಂಗ್ರಹಿಸಿಡುವ ಸಾಮರ್ಥ್ಯದ ಒಡಿಶಾದ ಉದ್ದೇಶಿತ ತೈಲಾಗಾರ ಅತಿ ದೊಡ್ಡದಾಗಿದೆ. ಮೊದಲ ಹಂತದಲ್ಲಿ ಈಗಾಗಲೇ ಕರ್ನಾಟಕದಲ್ಲಿ ಎರಡು ಮತ್ತು ಆಂಧ್ರ ಪ್ರದೇಶದಲ್ಲಿ ಒಂದರಂತೆ ಒಟ್ಟು ಮೂರು ತೈಲಾಗಾರಗಳನ್ನು ಸ್ಥಾಪಿಸಲಾಗಿದೆ.