ಪಟ್ನಾ (ಪಿಟಿಐ): ಇತ್ತೀಚೆಗೆ ಬಿಹಾರದಲ್ಲಿ ನಡೆದ ರಾಜ್ಯಸಭೆ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ನಾಲ್ವರು ಶಾಸಕರ ಸದಸ್ಯತ್ವ ರದ್ದತಿಗೆ ಆಡಳಿತಾರೂಢ ಜೆಡಿಯು ಮುಂದಾಗಿದೆ.
ನಿರಂತರವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಶಾಸಕರ ಶಾಸಕತ್ವ ರದ್ದು ಮಾಡಬೇಕು ಎಂದು ಸಭಾಧ್ಯಕ್ಷರಿಗೆ ಶಿಫಾರಸು ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಶಾಸಕರಾದ ಜ್ಞಾನೇಂದ್ರ ಸಿಂಗ್ ಗ್ಯಾನು, ರಾಹುಲ್ ಕುಮಾರ್, ನೀರಜ್ ಸಿಂಗ್ ಬಬ್ಲೂ ಮತ್ತು ರವೀಂದ್ರ ರಾಯ್ ಅವರ ಶಾಸಕತ್ವವನ್ನು ರದ್ದು ಮಾಡುವಂತೆ ಜೆಡಿಯು ಮುಖ್ಯ ಸಚೇತಕ ಶ್ರವಣ್ ಕುಮಾರ್ ಅವರು ಸಭಾಧ್ಯಕ್ಷ ಉದಯ್ ನಾರಾಯಣ್ ಚೌಧರಿ ಅವರಿಗೆ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಉಪ ಚುನಾವಣೆಯಲ್ಲಿ ಈ ನಾಲ್ವರು ನಡೆದುಕೊಂಡ ರೀತಿ ಅವರಿಗೆ ಪಕ್ಷದಲ್ಲಿ ಮುಂದುವರಿಯುವುದಕ್ಕೆ ಮನಸ್ಸಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಶ್ರವಣ್ ಕುಮಾರ್ ಹೇಳಿದ್ದಾರೆ.
ಈ ನಾಲ್ವರು ಶಾಸಕರು ಜೆಡಿಯು ಭಿನ್ನಮತೀಯ ಚಟುವಟಿಕೆಗಳ ಮುಂಚೂಣಿಯಲ್ಲಿದ್ದರು. ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿದ್ದ ಇವರು ಇಬ್ಬರು ಪಕ್ಷೇತರ ಅಭ್ಯರ್ಥಿಗಳಿಗೆ ಸೂಚಕರಾಗಿದ್ದರು. ಅವರ ಚುನಾವಣಾ ಏಜೆಂಟ್ಗಳಾಗಿಯೂ ಕೆಲಸ ಮಾಡಿದ್ದರು.
ಪಕ್ಷದ ವಿರುದ್ಧ ಬಂಡಾಯ ಸಾರಿರುವ 18 ಶಾಸಕರ ಹೆಸರನ್ನೂ ಶ್ರವಣ್ ಕುಮಾರ್ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಅಧ್ಯಕ್ಷ ಶರದ್ ಯಾದವ್ ಮತ್ತು ಮುಖಂಡ ನಿತೀಶ್ ಕುಮಾರ್ ಅವರಿಗೆ ವರದಿ ಸಲ್ಲಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.