ಉಡುಪಿ: ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ 5ನೇ ವರ್ಷದ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ ಕಾರ್ಯಕ್ರಮ ಫೆಬ್ರುವರಿ 1ರಿಂದ 9ರ ವರೆಗೆ ಮುದ್ರಾಡಿಯ ನಾಟ್ಕದೂರಿನಲ್ಲಿ ನಡೆಯಲಿದೆ ಎಂದು ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಫೆ. 1ರಂದು ಸಂಜೆ 7ಗಂಟೆಗೆ ರಾಷ್ಟ್ರೀಯ ರಂಗೋತ್ಸವಕ್ಕೆ ಚಾಲನೆ ನೀಡುವರು. ಅದೇ ದಿನ ಸಂಜೆ 7.30ಕ್ಕೆ ಬೆಂಗಳೂರು ತಂಡದಿಂದ ‘ಸತ್ತವರ ನೆರಳು’ ಕನ್ನಡ ನಾಟಕ ಪ್ರದರ್ಶನವಾಗಲಿದೆ ಎಂದರು.
ಫೆ. 2ರಂದು ಸಂಜೆ 7.30ಕ್ಕೆ ದೃಶ್ಯ ಬೆಂಗಳೂರು ತಂಡದಿಂದ ‘ಅಗ್ನಿವರ್ಣ’ ಕನ್ನಡ ನಾಟಕ, 3ರಂದು ರಂಗಾಯಣ ಮೈಸೂರು ತಂಡದಿಂದ ‘ಕೃಷ್ಣೇಗೌಡನ ಆನೆ’ ಕನ್ನಡ ನಾಟಕ, 4ರಂದು ಮುದ್ರಾಡಿ ನಮ ತುಳುವರ್ ಕಲಾ ಸಂಘಟನೆಯಿಂದ ‘ಪಟ್ಟೆ ತತ್ತಂಡ್’ ತುಳು ನಾಟಕ, 5ರಂದು ಪುಣೆ ಆಕಾಂಕ್ಷ ರಂಗಭೂಮಿ ತಂಡದಿಂದ ‘ಹಿಜಡಾ’ ಮರಾಠಿ ನಾಟಕ, 6ರಂದು ಹಾವೇರಿ ಶೇಷಗಿರಿ ಕಲಾತಂಡದಿಂದ ‘ಇವ ನಮ್ಮವ’ ಕನ್ನಡ ನಾಟಕ, 7ರಂದು ಸಾರ್ಸ ಅಸ್ಸಾಮ್ ತಂಡದಿಂದ ‘ದುಶ್ಯಂತ ದ ಲಯರ್’ ಅಸ್ಸಾಮಿ ನಾಟಕ ಮತ್ತು 8ರಂದು ದೆಹಲಿ ಪಾಂಚಜನ್ಯ ತಂಡದಿಂದ ‘ಗಿಂಪಲ್ ದ ಫೂಲ್’ ಹಿಂದಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಸಂಸ್ಥೆಯ ಸುಧೀರ್ ಏನೆಕಲ್ಲು, ಸುಧೀಂದ್ರ, ವಾಣಿ ಸುಕುಮಾರ್, ಸುಕನ್ಯಾ ಉಮೇಶ್ ಕಲ್ಮಾಡಿ ಉಪಸ್ಥಿತರಿದ್ದರು.