ಬೆಂಗಳೂರು: ದ್ರಾಕ್ಷಿ ಮತ್ತು ವೈನ್ ಉದ್ಯಮದಲ್ಲಿ ಕರ್ನಾಟಕದ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಕರ್ನಾಟಕ ವೈನ್ ಮಂಡಳಿಯು ಜುಲೈ 25ರಿಂದ 27ರವರೆಗೆ ನಗರದ ಅರಮನೆ ಮೈದಾನದ ಆವರಣದಲ್ಲಿ ‘ಅಂತರರಾಷ್ಟ್ರೀಯ ವೈನ್ ಉತ್ಸವ-– 2014’ ಏರ್ಪಡಿಸಿದೆ.
ದ್ರಾಕ್ಷಿ ಬೆಳೆಗಾರರು, ವೈನ್ ತಯಾರಿಸುವ (ವೈನರಿ) ಉದ್ದಿಮೆದಾರರು ಮತ್ತು ಗ್ರಾಹಕರಿಗೆ ಸಂಪರ್ಕ ವೇದಿಕೆಯಾಗಲಿರುವ ಈ ಉತ್ಸವದಲ್ಲಿ 7 ಜಾಗತಿಕ ವೈನ್ ಕಂಪೆನಿಗಳು ಸೇರಿದಂತೆ 35 ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಲಿವೆ. ವೈನ್ ಟೇಸ್ಟಿಂಗ್, ಮಾರಾಟ, ವೈನ್ ಮತ್ತು ಆಹಾರ ಹೊಂದಾಣಿಕೆ, ವೈನ್ ತಯಾರಿಕೆ, ಕರಕುಶಲ ವಸ್ತುಗಳ ಪ್ರದರ್ಶನವಿರಲಿದೆ’ ಎಂದು ಕರ್ನಾಟಕ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ಜಿ.ವಿ.ಕೃಷ್ಣರಾವ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ರಾಜ್ಯದಲ್ಲಿ 19,700 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೇಸಾಯ ಮಾಡಲಾಗುತ್ತಿದೆ. ಪ್ರತಿ ವರ್ಷ 3.21 ಲಕ್ಷ ಟನ್ ದ್ರಾಕ್ಷಿ ಉತ್ಪಾದನೆಯಾಗುತ್ತಿದೆ. ರಾಜ್ಯದ ಒಟ್ಟು ವೈನ್ ವಹಿವಾಟು ₨ 150 ಕೋಟಿ ಗಳಷ್ಟಿದೆ’ ಎಂದರು.
‘ದ್ರಾಕ್ಷಿ ಬೆಳೆ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಹೀಗಾಗಿ, ದ್ರಾಕ್ಷಿ ಸಂಸ್ಕರಣೆ ಕೇಂದ್ರಗಳಾದ ವೈನ್ ಉದ್ಯಮವನ್ನು ಅಭಿವೃದ್ಧಿಪಡಿಸಲು ಆದ್ಯತೆಯನ್ನು ನೀಡಬೇಕಿದೆ’ ಎಂದರು.
‘ಪ್ರತಿ ವರ್ಷ ರಾಜ್ಯದಲ್ಲಿ 51 ಲಕ್ಷ ಲೀ. ವೈನ್ ಮಾರಾಟವಾಗುತ್ತಿದೆ. ಬೇರೆ ದೇಶಗಳಾದ ಫ್ರಾನ್ಸ್, ಇಟಲಿ, ನ್ಯೂಜಿಲೆಂಡ್ ದೇಶಗಳಿಗೆ ರಫ್ತಾಗುತ್ತಿದೆ’ ಎಂದು ವಿವರಿಸಿದರು.
‘ವೈನ್ಗಾಗಿ ಬೆಳೆಯುವ ದ್ರಾಕ್ಷಿಯನ್ನು ಬೇರೆ ಯಾವುದಕ್ಕೂ ಬಳಸಲು ಬರುವುದಿಲ್ಲ. ಹೀಗಾಗಿ ರೈತರಿಗೆ ನಷ್ಟವಾಗದಂತೆ ರಾಜ್ಯದಲ್ಲಿರುವ 17 ವೈನರಿಗಳು ರೈತರೊಂದಿಗೆ ಒಪ್ಪಂದ ಕೃಷಿ ಮಾಡುವಂತೆ ಸಲಹೆಯನ್ನು ನೀಡಲಾಗಿದೆ’ ಎಂದರು.
‘ಕಾರ್ಯಕ್ರಮವನ್ನು ಜುಲೈ 25 ರಂದು ಸಂಜೆ 4.30ಕ್ಕೆ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದಾರೆ. ‘26 ಮತ್ತು 27 ರಂದು ಮನೋರಂಜನಾ ಕಾರ್ಯಕ್ರಮಗಳಿದ್ದು, ದ್ರಾಕ್ಷಿ ತುಳಿದು ವೈನ್ ತಯಾರಿಸುವ ಪದ್ಧತಿಯ ಕುರಿತು ಮಾಹಿತಿ ನೀಡಲಾಗುವುದು’ ಎಂದು ಹೇಳಿದರು.
ಪ್ರವೇಶ ದರ
ಪ್ರತಿಯೊಬ್ಬರಿಗೂ ಪ್ರವೇಶ ದರವು ₨ 49 ಇದೆ. ಟಿಕೆಟ್ಗಳು ಎಲ್ಲಾ ಹಾಪ್ಕಾಮ್ಸ್ ಮತ್ತು ಮಧುಲೋಕ ಮಳಿಗೆಗಳಲ್ಲಿ ಹಾಗೂ ಆನ್ಲೈನ್ bookmyshow.com ನಲ್ಲಿ ದೊರೆಯುತ್ತವೆ.
ಹಾಪ್ಕಾಮ್ಸ್ ನಿರಾಸಕ್ತಿ
ಹಾಪ್ಕಾಮ್ಸ್ನಲ್ಲಿ ವೈನ್ ಮಾರಾಟಕ್ಕೆ ಕಾನೂನು ತಿದ್ದುಪಡಿ ಮಾಡಲಾಗಿದೆ. ಆದರೆ, ಹಾಪ್ಕಾಮ್ಸ್ ಮಳಿಗೆಗಳು ವೈನ್ ಮಾರಾಟಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಅದಕ್ಕೆ ಅವರದ್ದೇ ಕಾರಣಗಳಿರಬಹುದು.
– ಜಿ.ವಿ.ಕೃಷ್ಣರಾವ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.