ನವದೆಹಲಿ (ಪಿಟಿಐ): ಸುಮಾರು ಎರಡು ತಿಂಗಳ ‘ಬಿಡುವಿನ’ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ಭೂಸ್ವಾಧೀನ ಮಸೂದೆಯನ್ನು ಸಾರಾಸಗಟಾಗಿ ವಿರೋಧಿಸುವುದಾಗಿ ಶನಿವಾರ ಘೋಷಿಸಿದ್ದಾರೆ.
ಭಾನುವಾರ ನಡೆಯಲಿರುವ ಕಿಸಾನ್ ರ್ಯಾಲಿ ಮುನ್ನದಿನವಾದ ಶನಿವಾರ ತಮ್ಮ ನಿವಾಸದಲ್ಲಿ ವಿವಿಧ ರಾಜ್ಯಗಳ ಪ್ರತಿನಿಧಿಗಳು ಹಾಗೂ ರೈತರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿದರು.
ಎನ್ಡಿಎ ಸರ್ಕಾರದ ಭೂಸ್ವಾಧೀನ ಮಸೂದೆ ಒಳಗೊಂಡಂತೆ ರೈತರ ಸಮಸ್ಯೆಗಳ ಪರಿಹಾರಿಸುವ ನಿಟ್ಟಿನಲ್ಲಿ ತಾನು ಹಾಗೂ ತಮ್ಮ ಪಕ್ಷವು ‘ನಿರ್ಣಾಯಕ ಹೋರಾಟ’ ನಡೆಸಲಿದೆ ಎಂದು ರಾಹುಲ್ ಹೇಳಿರುವುದಾಗಿ ಪಕ್ಷದ ಮುಖಂಡರು ತಿಳಿಸಿದ್ದಾರೆ.
ಸುಮಾರು 50 ನಿಮಿಷಗಳ ಕಾಲ ನಡೆದ ಸಂವಾದದಲ್ಲಿ ಪ್ರಸ್ತಕ ಬಿಜೆಪಿ ನೇತೃತ್ವದ ಸರ್ಕಾರದಲ್ಲಾಗಿರಬಹುದು ಅಥವಾ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿರಬಹುದು ಕೃಷಿಯ ಬಗ್ಗೆ ಗೊತ್ತಿಲ್ಲದ ಜನರು ರೈತರಿಗೆ ಸಂಬಂಧಿಸಿದ ನೀತಿ ರೂಪಿಸುವ ಸ್ಥಾನಗಳಲ್ಲಿದ್ದಾರೆ ಎಂದು ಕೆಲ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಚೌಧರಿ ರಾಹುಲ್ ಜಿ’ ಸಂಬೋಧನೆ...
ಸಂವಾದದ ವೇಳೆ ರಾಹುಲ್ ಅವರ ಗಮನ ಸೆಳೆಯುವ ನಿಟ್ಟಿನಲ್ಲಿ ಹರಿಯಾಣದ ಭಿವಾನಿಯ ಕೆಲ ಹಿರಿಯ ರೈತರು ರಾಹುಲ್ ಅವರನ್ನು ‘ಚೌಧರಿ ರಾಹುಲ್ ಜಿ’ ಎಂದು ಸಂಬೋಧಿಸಿದರು.