ಬದಾಯೂಂ (ಪಿಟಿಐ): ಉತ್ತರಪ್ರದೇಶದ ಬದಾಯೂಂನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ, ಕೊಲೆಯಾದ ದಲಿತ ಬಾಲಕಿಯರಿಬ್ಬರ ಕುಟುಂಬ ಸದಸ್ಯರು, ‘ನಾವು ಇಲ್ಲಿ ಸುರಕ್ಷಿತವಾಗಿಲ್ಲ’ ಎಂದು ಭಾನುವಾರ ಹೇಳಿದ್ದಾರೆ.
‘ನಮಗೆ ರಾಜ್ಯ ಪೊಲೀಸರ ಮೇಲೆ ನಂಬಿಕೆಯಿಲ್ಲ. ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ‘ವಿಶೇಷ ತನಿಖಾ ತಂಡ’ (ಎಸ್ಐಟಿ) ಮತ್ತು ಪೊಲೀಸರು ನಮ್ಮ ಮೇಲೆ ಒತ್ತಡ ಹೇರುತ್ತಿದ್ದು, ಗ್ರಾಮದಲ್ಲಿ ನಾವು ಸುರಕ್ಷಿತವಾಗಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ, ನಾವು ಬಲವಂತವಾಗಿ ಗ್ರಾಮ ತೊರೆಯಬೇಕಾಗುತ್ತದೆ’ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
‘ಪೊಲೀಸರು ಪ್ರಕರಣವನ್ನು ತಿರುಚುತ್ತಿದ್ದಾರೆ. ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸಬೇಕು. ಆಗ ಮಾತ್ರ ಸತ್ಯಾಂಶ ಬೆಳಕಿಗೆ ಬರಲಿದೆ. ಅಲ್ಲದೆ, ಸಿಬಿಐ ಮುಂದೆ ಮಾತ್ರ ನಾವು ಹೇಳಿಕೆ ನೀಡುತ್ತೇವೆ’ ಎಂದು ಅವರು ತಿಳಿಸಿದರು.
‘ಘಟನೆಗೆ ಆಸ್ತಿ ವಿಷಯ ಕಾರಣವಿರಬಹುದು’ ಎಂಬ ಡಿಜಿಪಿ ಎ.ಎಲ್. ಬ್ಯಾನರ್ಜಿ ಅವರ ಹೇಳಿಕೆಯನ್ನು ಇದೇ ವೇಳೆ ಅಲ್ಲಗಳೆದ ಮೃತ ಬಾಲಕಿಯೊಬ್ಬಳ ತಂದೆ, ‘ನನಗೆ ಮೂವರು ಸಹೋದರರಿದ್ದು, ಎಲ್ಲರೂ ಒಟ್ಟಾಗಿಯೇ ವಾಸಿಸುತ್ತೇವೆ. ಅಲ್ಲದೆ, ನಮಗಿರುವುದು ಕೇವಲ ಮುಕ್ಕಾಲು ಎಕರೆ ಭೂಮಿ ಅಷ್ಟೆ’ ಎಂದು ಹೇಳಿದರು.