ಕೋಲ್ಕತ್ತ: ಮ್ಯಾಗ್ಸೆಸ್ಸೆ ಮತ್ತು ಜ್ಞಾನಪೀಠ ಪುರಸ್ಕೃತ ಲೇಖಕಿ ಹಾಗೂ ಹೋರಾಟಗಾರ್ತಿ ಮಹಾಶ್ವೇತಾ ದೇವಿ, ತಮ್ಮ ಮಾಜಿ ಆಪ್ತ ಸಹಾಯಕ ಜೋಯ್ ಭದ್ರಾ ಎಂಬುವರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಆಪ್ತ ಸಹಾಯಕ ತಮಗೆ ಅತಿಯಾದ ಪ್ರಮಾಣದಲ್ಲಿ ನಿದ್ರೆ ಮಾತ್ರೆ ನೀಡಿ ಮಂಪರಿನಲ್ಲಿರುವಾಗ ಮುಖ್ಯವಾದ ದಾಖಲೆಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಭದ್ರಾ ತಮ್ಮ ಹೇಳಿಕೆಗಳನ್ನು ತಿರುಚಿ ದ್ದಾರೆ ಅಲ್ಲದೆ ನಕಲಿ ಪ್ರಮಾಣ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ಈ ದಾಖಲೆಗಳ ಪ್ರಕಾರ ರಾಜ್ಯ ಸರ್ಕಾರ ತನಗೆ ಭೂಮಿ ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ ಎಂದು ದಕ್ಷಿಣ ಕೋಲ್ಕತ್ತದ ಜಾದವಪುರ ಪೊಲೀಸ್ ಠಾಣೆಗೆ ಬುಧವಾದ ಸಲ್ಲಿಸಿದ ನಾಲ್ಕು ಪುಟಗಳ ದೂರಿನಲ್ಲಿ ವಿವರಿಸಿದ್ದಾರೆ.
ಆದರೆ, ದೇವಿ ಅವರ ಆರೋಪ ವನ್ನು ಭದ್ರಾ ಅಲ್ಲಗಳೆದಿದ್ದಾರೆ. ತಮ್ಮ ಕುಟುಂಬ ಸದಸ್ಯರ ಒತ್ತಡದಿಂದ ಅವರು ಈ ರೀತಿ ದೂರು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಹಾಶ್ವೇತಾದೇವಿ ಅವರು ನೀಡಿರುವ ದೂರಿನ ಅನ್ವಯ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ತನಿಖೆ ಹಂತದಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹಲವು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದಾಗ ದೇವಿ ಅವರನ್ನು ಭದ್ರಾ ತಮ್ಮೊಂದಿಗೇ ಇರಿಸಿ ಕೊಂಡಿದ್ದರು. ಅಲ್ಲದೆ ಅವರನ್ನು ಭೇಟಿ ಮಾಡಲು ಯಾರೂ ಬರದಂತೆ ನೋಡಿಕೊಂಡಿದ್ದರು. ದೇವಿ ಅವರ ಪಕ್ಕವೇ ಕುಳಿತುಕೊಳ್ಳುತ್ತಿದ್ದ ಭದ್ರಾ, ಅವರ ಪರವಾಗಿ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಿದ್ದರು ಎಂದು ದೇವಿ ಅವರ ಹಲವಾರು ಹಿತಚಿಂತಕರು ಮತ್ತು ಆಪ್ತರು ಹೇಳಿದ್ದಾರೆ.
ಕೆಲದಿನಗಳ ಹಿಂದೆ ದೇವಿ ಅವರ ಮೊಮ್ಮಗ ತಥಾಗತಾ ಭಟ್ಟಾಚಾರ್ಯ, ಭದ್ರಾ ಅವರ ಹಿಡಿತದಿಂದ ಬಿಡುಗಡೆ ಮಾಡಿದ ನಂತರ ಹಲವು ವಿಷಯಗಳು ಬಹಿರಂಗವಾಗಿವೆ. ನಿದ್ರೆ ಮಾತ್ರೆಗಳ ಅತಿಯಾದ ಸೇವನೆಯಿಂದ ಇಡೀ ದಿನ ಅವರು ಮಂಪರಿನಲ್ಲಿ ಇರುತ್ತಿದ್ದರು ಎನ್ನಲಾಗಿದೆ.