ನವದೆಹಲಿ (ಪಿಟಿಐ): ಬೊಕ್ಕಸಕ್ಕೆ ಹಾನಿ, ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ ತೋರುವ ಸರ್ಕಾರಿ ನೌಕರರ ವಿರುದ್ಧದ ಇಲಾಖೆ ವಿಚಾರಣಾ ಪ್ರಕ್ರಿಯೆಯನ್ನು ಅವರ ನಿವೃತ್ತಿ ನಂತರವೂ ಮುಂದುವರೆಸಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಎಸ್. ಖೆಹರ್ ನೇತೃತ್ವದ ಪೀಠ, ‘ನಿವೃತ್ತಿ ನಂತರವೂ ನೌಕರರ ವಿರುದ್ಧದ ಇಲಾಖಾ ವಿಚಾರಣಾ ಪ್ರಕ್ರಿಯೆ ಮುಂದುವರೆಸಬಹದು. ಜತೆಗೆ, ಅಂತಹ ನೌಕರರಿಂದ ಆಗಿರುವ ನಷ್ಟವನ್ನು ಭರಿಸುವಂತೆ ಆದೇಶಿಸಬಹುದಾಗಿದೆ’ ಎಂದು ಸ್ಪಷ್ಟಪಡಿಸಿತು.
ಬೊಕ್ಕಸಕ್ಕೆ ನಷ್ಟ ಉಂಟುಮಾಡುವ ಗಂಭೀರ ಆರೋಪಗಳಿದ್ದಾಗ ಮಾತ್ರ, ಸರ್ಕಾರಿ ನೌಕರರನ್ನು ನಿವೃತ್ತಿ ನಂತರವೂ ಇಲಾಖೆ ವಿಚಾರಣೆಗೆ ಒಳಪಡಿಸಬಹುದು ಎಂದು ಕಲ್ಕತ್ತಾ ಹೈಕೋರ್ಟ್ ಈ ಮೊದಲು ನೀಡಿದ್ದ ಆದೇಶವನ್ನು ಇದೇ ವೇಳೆ ತಳ್ಳಿಹಾಕಿದೆ.