ರಾಷ್ಟ್ರಕವಿ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬಹುದು ಎಂದು ಆಯ್ಕೆ ಸಮಿತಿ ನೀಡಿದ್ದ ಕರೆಗೆ ರಾಜ್ಯದಲ್ಲಿ ಕೇವಲ 70 ಜನ ಪ್ರತಿಕ್ರಿಯೆ ನೀಡಿದ್ದಾರೆ (ಪ್ರ.ವಾ., ಫೆ. 21). ಇದು ಬೇಸರಪಟ್ಟುಕೊಳ್ಳಬೇಕಾದ ಸುದ್ದಿಯಂತೂ ಖಂಡಿತ ಅಲ್ಲ.
ರಾಷ್ಟ್ರಕವಿ ಎಂಬ ಗೌರವ ನೀಡಲು ಒಂದು ಸಮಿತಿಯನ್ನು ಈ ಸರ್ಕಾರ ಏಕೆ ರಚಿಸಿದೆಯೋ ಗೊತ್ತಿಲ್ಲ. ಏಕೆಂದರೆ, ತನ್ನ ನಿಲುವನ್ನು ತೀಕ್ಷ್ಣವಾಗಿ ಖಂಡಿಸುವ ಯಾವುದೇ ಸಾಹಿತಿ, ಕವಿಗೆ ‘ರಾಷ್ಟ್ರಕವಿ’ ಗೌರವವನ್ನು ಯಾವ ಸರ್ಕಾರವೂ ನೀಡುವುದಿಲ್ಲ, ಬಿಡಿ! ಇದು ಆಸ್ಥಾನ ಕವಿ ಸ್ಥಾನಮಾನ ಇದ್ದಂತೆ. ಪ್ರಜಾಪ್ರಭುತ್ವದಲ್ಲಿ ಇಂಥ ಗೌರವವನ್ನು ಯಾರೋ ಒಬ್ಬರಿಗೆ ಏಕೆ ನೀಡಬೇಕು?
ಅದಿರಲಿ, ನಾವು ಕವಿ, ಸಾಹಿತಿಗಳಿಗೆ ಅವರಿಗೆ ಕೊಡಬೇಕಿರುವುದಕ್ಕಿಂತ ಹೆಚ್ಚಿನ ಗೌರವ ನೀಡುತ್ತಿದ್ದೇವೆಯೇ? ಕವಿ, ಸಾಹಿತಿಗೆ ಮಾತ್ರ ಏಕೆ ‘ರಾಷ್ಟ್ರಕವಿ’ ಗೌರವ? ವಿಜ್ಞಾನಿ, ರೈತ, ಪೊಲೀಸ್, ರಾಜಕಾರಣಿ, ಸಾಫ್ಟ್ವೇರ್ ಎಂಜಿನಿಯರ್, ವಕೀಲ, ಆಡಳಿತ ಅಧಿಕಾರಿ ಇವರಿಗೆಲ್ಲ ಇದೇ ಸ್ವರೂಪದ ಗೌರವ ಏಕಿಲ್ಲ? ಸಾಹಿತಿ, ಕವಿಯಾದವರು ಇವರೆಲ್ಲರಿಗಿಂತ ಮಿಗಿಲಾದವರೇ? ಆಳುವ ವರ್ಗ ದಯಪಾಲಿಸುವ ಇಂಥ ಗೌರವವನ್ನು ಒಪ್ಪಿಕೊಳ್ಳಲು ಇಂದಿನ ಸಾಹಿತಿಗಳು ಮನಸ್ಸು ಮಾಡಿಯಾರೇ?