ಗುಡಿಬಂಡೆ: ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತರುವಲ್ಲಿ ಸರ್ಕಾರ ನಿರ್ಲಕ್ಷ್ಯ ತಾಳಿದೆ. ಗ್ರಾಮೀಣ ಮಟ್ಟದಲ್ಲಿ ಹೋರಾಟ ರೂಪಿಸಿ ಸರ್ಕಾರದ ಗಮನ ಸೆಳೆಯಬೇಕು ಎಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಗ್ರಾಮ ಪಂಚಾಯತಿ ಮಟ್ಟದ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಭೆಯಲ್ಲಿ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯ ಕೆರೆಗಳು ನೀರಿಲ್ಲದೆ ಕ್ರಿಕೆಟ್ ಮೈದಾನಗಳಾಗಿವೆ. ಕೆರೆಗಳ ತುಂಬ ಹೂಳುತುಂಬಿದೆ. ರೈತರು ಮುಂದಿನ ದಿನಗಳಲ್ಲಿ ಈ ಭಾಗವು ನೀರಿಲ್ಲದೆ ಮರುಭೂಮಿಯಂತೆ ಆಗುವುದರಲ್ಲಿ ಸಂಶಯವೇ ಇಲ್ಲ ಎಂದರು.
ಅವಿಭಜಿತ ಕೋಲಾರ–-ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಒದಗಿಸಲು ವರದಿ ಸಲ್ಲಿಸಲಾಗಿದೆ. ಆದರೆ ಸರ್ಕಾರ ಪರಮಶಿವಯ್ಯ ಅವರ ವರದಿಯನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ವರದಿಯನ್ನು ನಿರ್ಲಕ್ಷ್ಯ ಮಾಡಿದೆ. ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿವಿಧ ಸಂಘಟನೆಗಳು ಪಕ್ಷ, ಜಾತಿ, ಬೇಧ ಮರೆತು ಎಲ್ಲರೂ ಒಟ್ಟಾಗಿ ಹೋರಾಡುವ ಮೂಲಕ ಸರ್ಕಾರದ ಗಮನ ಸೆಳೆಯಬೇಕು ಎಂದು ತಿಳಿಸಿದರು.
ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳಾದ ಸೊಣ್ಣೇಗೌಡ, ಚಂದ್ರಣ್ಣ, ಹರೀಶ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬೈರೇಗೌಡ, ಪ್ರಧಾನ ಕಾರ್ಯದರ್ಶಿ ವೇಣು, ಜೀವಿಕ ರಾಮಾಂಜಿನಯ್ಯ, ಸುಜಾತ, ಪ್ರಮುಖರಾದ ಬಿ.ನಾರಾಯಣಸ್ವಾಮಿ, ಎಂ.ಬಿ.ಶ್ರೀನಿವಾಸರೆಡ್ಡಿ, ರಾಮರತ್ನಮ್ಮ, ಎಂ,ಎನ್.ಗಂಗರೆಡ್ಡಿ ಸೇರಿದಂತೆ ಇತರರಿದ್ದರು.