ಬೆಂಗಳೂರು: ಹೆಸರಘಟ್ಟ ಮುಖ್ಯರಸ್ತೆ ವಡೇರಹಳ್ಳಿಯ ಮನೆಯೊಂದರಲ್ಲಿ ಶನಿವಾರ ಬ್ರಿಜೇಶ್ಕುಮಾರ್ (24) ಎಂಬುವರ ಶವ ನೀರಿನ ಡ್ರಂನಲ್ಲಿ ಪತ್ತೆಯಾಗಿದೆ.
ಹಣೆ ಮತ್ತು ತಲೆಗೆ ಕಬ್ಬಿಣದ ಸರಳಿನಿಂದ ಹೊಡೆದು, ನಂತರ ನೀರಿನಲ್ಲಿ ಮುಳುಗಿಸಿ ಬ್ರಿಜೇಶ್ ಅವರನ್ನು ಕೊಲೆ ಮಾಡಲಾಗಿದೆ. ಆ ಮನೆಯಲ್ಲಿ ವಾಸವಿದ್ದ ಜಾರ್ಖಂಡ್ ಮೂಲದ ಮೇರಿ ಹಾಗೂ ಸಂತೋಷ್ ದಂಪತಿ, ಡಿ.17 ರಿಂದ ನಾಪತ್ತೆಯಾಗಿದ್ದಾರೆ. ಹೀಗಾಗಿ ಅವರೇ ಈ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಬ್ರಿಜೇಶ್, ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಲಕ್ಷ್ಮೀಪುರ ಕ್ರಾಸ್ನಲ್ಲಿ ನೆಲೆಸಿದ್ದ ಅವರು, ಸಮೀಪದ ಬಟ್ಟೆ ಡೈಯಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಮೇರಿ ಸಹ ಅಲ್ಲೇ ಉದ್ಯೋಗಿ ಯಾಗಿದ್ದರು.
‘ಡಿ.17ರಂದು ಬ್ರಿಜೇಶ್, ಮೇರಿ ಅವರ ಮನೆಗೆ ಹೋಗಿದ್ದನ್ನು ಸ್ಥಳೀಯರು ನೋಡಿದ್ದಾರೆ. ಅದೇ ದಿನ ರಾತ್ರಿ ಅವರ ಕೊಲೆ ನಡೆದಿರುವ ಸಾಧ್ಯತೆ ಇದೆ. ಡಿ.18 ರಂದು ಠಾಣೆಗೆ ಬಂದಿದ್ದ ಮೃತರ ಭಾವ ಅವದೇಶ್, ಬ್ರಿಜೇಶ್ ಕಾಣೆಯಾಗಿರುವ ಬಗ್ಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡ ಸಿಬ್ಬಂದಿ, ಭಾವಚಿತ್ರ ತಂದು ಕೊಡುವಂತೆ ತಿಳಿಸಿದ್ದರು. ಅದರಂತೆ ಅವರು, ಶನಿವಾರ ಬೆಳಿಗ್ಗೆ ಬ್ರಿಜೇಶ್ರ ಭಾವಚಿತ್ರ ತಂದುಕೊಟ್ಟರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಅವದೇಶ್ ಸಹ ಮೃತರು ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲೇ ವ್ಯವಸ್ಥಾಪಕರಾಗಿದ್ದಾರೆ. ಅವರೊಟ್ಟಿಗೆ ಕಾರ್ಖಾನೆಗೆ ತೆರಳಿ ಸಹೋದ್ಯೋಗಿಗಳ ವಿಚಾರಣೆ ನಡೆಸಲಾಯಿತು. ಈ ವೇಳೆ ಮೇರಿ ಎರಡು ದಿನಗಳಿಂದ ಕೆಲಸಕ್ಕೆ ಬಂದಿಲ್ಲ ಎಂಬ ಸಂಗತಿ ಗೊತ್ತಾಯಿತು. ನಂತರ ಅವರ ಮನೆಗೆ ಹೋದಾಗ ಬೀಗ ಹಾಕಿತ್ತು. ಕಿಟಕಿ ಮೂಲಕ ನೋಡಿದಾಗ ನೀರಿನ ಡ್ರಂನಲ್ಲಿ ವ್ಯಕ್ತಿಯ ಕಾಲುಗಳು ಕಾಣಿಸುತ್ತಿದ್ದವು’ ಎಂದು ವಿವರಿಸಿದರು.
‘ಬೀಗ ಮುರಿದು ಒಳಗೆ ಹೋದ ಸಿಬ್ಬಂದಿ, ಡ್ರಂನಿಂದ ಶವವನ್ನು ಹೊರತೆಗೆದರು. ಆಗ ಅದು ಬ್ರಿಜೇಶ್ನ ಮೃತದೇಹ ಎಂಬುದು ಖಾತ್ರಿಯಾಯಿತು. ನಂತರ ಕೊಲೆ ಪ್ರಕರಣ ದಾಖಲಿಸಿಕೊಂಡು, ದಂಪತಿಯ ಪತ್ತೆಗೆ ವಿಶೇಷ ತಂಡ ರಚಿಸಲಾಯಿತು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.
ಟೈಲರ್ ಆತ್ಮಹತ್ಯೆ: ಸುಬ್ರಹ್ಮಣ್ಯನಗರ ಸಮೀಪದ ರಾಮ್ಮೋಹನ್ಪುರದಲ್ಲಿ ಶುಕ್ರವಾರ ಮಂಜುನಾಥ್ (40) ಎಂಬ ಟೈಲರ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿಯಿಂದ ದೂರವಾಗಿ ಪ್ರತ್ಯೇಕವಾಗಿ ನೆಲೆಸಿದ್ದ ಮಂಜುನಾಥ್, ಸಂಜೆ ಐದು ಗಂಟೆ ನಂತರ ಮಳಿಗೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಮಳಿಗೆ ಮಾಲೀಕರು ರಾತ್ರಿ 9.30ರ ಸುಮಾರಿಗೆ ಶೆಟರ್ ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಂಜುನಾಥ್ ಅವರ ಪೋಷಕರು ಸಹ ನಗರದಲ್ಲೇ ನೆಲೆಸಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರ ತಂದೆಯನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು, ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದಿದ್ದರು. ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಗೆ ಹೋಗಿ ತಂದೆಯ ಯೋಗಕ್ಷೇಮ ವಿಚಾರಿಸಿದ್ದ ಮಂಜುನಾಥ್, ಸಂಜೆ ಮಳಿಗೆಗೆ ಹಿಂದಿರುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.