ಹುಣಸಗಿ: ರಾಜನಕೋಳೂರು ಸಮೀಪದ ಹುಣಸಗಿ ವಿತರಣಾ ಕಾಲುವೆ ನವೀಕರಣ ಕಾಮಗಾರಿ ಭರದಿಂದ ಸಾಗಿದ್ದು, ಕೊನೆಯ ಭಾಗದ ಗ್ರಾಮಗಳಿಗೆ ಸಮರ್ಪಕ ನೀರು ತಲುಪುವುದೇ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಸುಮಾರು11.52 ಕಿ.ಮೀ. ಉದ್ದದ ಈ ಕಾಲುವೆ ನಿರ್ಮಾಣಕ್ಕಾಗಿ ಅಂದಾಜು ₨ 38 ಕೋಟಿ ಖರ್ಚು ಮಾಡಲಾಗುತ್ತಿದೆ. 26 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.
ಗೆದ್ದಲಮರಿ, ಕಕ್ಕೇರಾ, ದೇವಾಪುರ,ಹುಣಸಗಿ ಸೇರಿ 90 ಹಳ್ಳಿಗಳ ಜಮೀನು ನೀರಾವರಿಗೆ ಒಳಪಡುತ್ತವೆ. ಆದರೆ ಶಾಂತಪುರ, ತಿಂಥಣಿ, ಅರಳಹಳ್ಳಿ, ಬನದೊಡ್ಡಿ ಸೇರಿದಂತೆ ಇತರ ಗ್ರಾಮಗಳಿಗೆ ನೀರು ತಲುಪಿಸಲು ಸಾಧ್ಯವಾಗಿರಲಿಲ್ಲ.
ಶಾಖಾ ಕಾಲುವೆಗೆ ಕಾಮಗಾರಿ ವೀಕ್ಷಿಸಿದ ಕಾರ್ಯ ನಿರ್ವಾಹಕ ಎಂಜಿನಿಯರ್ಗಳಾದ ಎಸ್. ರಂಗಾರಾಂ, ಅರುಣಕುಮಾರ ಬಾರಿಕೇರಿ, ಮತ್ತು ಸಹಾಯಕ ಎಂಜಿನಿಯರ್ ಎಚ್.ರೆಹಮಾನ್ ಮಾತನಾಡಿ, ಹುಣಸಗಿ ವಿತರಣಾ ಕಾಲುವೆ ನವೀಕರಣ ತಾಂತ್ರಿಕ ದೃಷ್ಟಿಯಿಂದ ಒಂದು ಸವಾಲಾಗಿತ್ತು. ಎರಡು ಕಿ.ಮೀ. ಮಾತ್ರ ಕಠಿಣ ಕೆಲಸವಾಗಿದೆ. ಇದು ಹೆಚ್ಚು ಆಳದ ಕಾಲುವೆ ಇದ್ದು, ಇದನ್ನು ತೀವ್ರ ಕಾಳಜಿಯಿಂದ ಹಿರಿಯ ತಾಂತ್ರಿಕ ಅಧಿಕಾರಿಗಳ ಅವಲೋಕನ ಮತ್ತು ಸಹಕಾರದೊಂದಿಗೆ ನಿರ್ಮಾಣ ಹಾಗೂ ನವೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹುಣಸಗಿ ವಿತರಣಾ ಕಾಲುವೆಗೆ ನವೀಕರಣ ಕಾಮಗಾರಿಯನ್ನು ಆಧುನಿಕ ತಂತ್ರಜ್ಞಾನದಿಂದ ಕೈಗೊಳ್ಳಲಾಗಿದ್ದು, ನೀರು ಸೋರಿಕೆಯಾಗುವ ಸಾಧ್ಯತೆ ಇಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.
ಮೇಲ್ಭಾಗದ ರೈತರು ನೀರಾವರಿಗೆ ಒಳಪಡದ ಜಮೀನಿಗೆ ನೀರು ಪಡೆಯಲಿ. ಆದರೆ ಕಾಲುವೆ ಕೊನೆ ಭಾಗದ ರೈತರ ಜಮೀನುಗಳಿಗೂ ನೀರು ಸಿಗುವಂತಾಗಬೇಕು. ಈ ದಿಸೆಯಲ್ಲಿ ಅಧಿಕಾರಿಗಳು ಮೃದು ಧೋರಣೆ ತೋರದೇ ನವೀಕರಣಗೊಂಡ ಕಾಲುವೆಗೆ ಯಾರಾದರೂ ಹಾನಿ ಮಾಡಿದರೆ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಆಗ ಮಾತ್ರ ಎಲ್ಲ ರೈತರಿಗೆ ಅನುಕೂಲವಾಗಲಿದೆ ಎಂದು ಕಾಲುವೆ ಕೊನೆಯ ಭಾಗದ ರೈತ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ ಹೇಳಿದ್ದಾರೆ.