ತುಮಕೂರು ಜಿಲ್ಲೆಯ ಹಳ್ಳಿಯೊಂದರ ವಿಳಾಸಕ್ಕೆ ಹಣ ಕಳುಹಿಸುವ ಸಲುವಾಗಿ ನಾನು ಬೆಂಗಳೂರು ನಗರದಲ್ಲಿರುವ ಸೇವಾನಗರದ ಅಂಚೆ ಕಚೇರಿಗೆ ಕಳೆದ ತಿಂಗಳ 27ರಂದು ಹೋಗಿ ಕನ್ನಡದಲ್ಲಿ ಬರೆದ ಅರ್ಜಿ ಫಾರಂ ನೀಡಿದೆ. ಅದನ್ನು ದಿಟ್ಟಿಸಿ ನೋಡಿ, ‘ಕನ್ನಡ ಗೊತ್ತಿಲ್ಲ. ಇಂಗ್ಲಿಷ್ನಲ್ಲಿ ಬರೆದುಕೊಡಿ’ ಎಂದರು. ನಾನು ‘ಸಾಧ್ಯವಿಲ್ಲ’ ಎಂದೆ. ‘ಕನ್ನಡದಲ್ಲಿ ಬರೆಯಲು ಅವಕಾಶ ಇರುವುದಾಗಿ ತಿಳಿ ಹೇಳಿದೆ. ನಿಮಗೆ ಗೊತ್ತಾಗದಿದ್ದರೆ ನಿಮ್ಮವರ ನೆರವು ಪಡೆಯಿರಿ’ ಎಂದೆ.
ವಿಷಯ ವಿಕೋಪಕ್ಕೆ ಹೋಗುವುದನ್ನು ಅರಿತ ಅವರು ಅಲ್ಲಿಯೇ ಇದ್ದ ಸಿಬ್ಬಂದಿ ನೆರವು ಪಡೆದು ನಗದು ಸಂದಾಯದ ಬಗ್ಗೆ ದಾಖಲಿಸಿದ ಚೀಟಿ ನೀಡಿದರು. ಇಲ್ಲಿ ಕನ್ನಡದ ಸೌಜನ್ಯಕ್ಕೆ ಗೆಲುವು ಸಿಕ್ಕಿದೆ ಎಂದು ನನಗನ್ನಿಸಿದೆ. ‘ವಾಚಕರವಾಣಿ’ಯಲ್ಲಿ ಈ ತಿಂಗಳ 19ರಂದು ‘ಸಹಿ ತಂದ ಸಂಕಷ್ಟ’ ಓದಿ ಈ ಅನುಭವ ಹಂಚಿಕೊಂಡಿದ್ದೇನೆ. ನಾಡು ನುಡಿಯ ಬಳಕೆಗೆ ಏನೆಲ್ಲ ಅಡ್ಡಿ ಆತಂಕ.