ಡಾ. ಮಾಯಾ ರಾವ್ ಅವರು ನೃತ್ಯ ಕ್ಷೇತ್ರದ ಧ್ರುವತಾರೆಯಂತೆ ಇದ್ದವರು. ದೇಶದ ಅದರಲ್ಲೂ ವಿಶೇಷವಾಗಿ ಕರ್ನಾಟಕದ ನೃತ್ಯರಂಗವನ್ನು ಶ್ರೀಮಂತಗೊಳಿಸಿದವರು, ವೈವಿಧ್ಯಗೊಳಿಸಿದವರು. ಹಾಗೆ ನೋಡಿದರೆ ಮಾಯಾರಾವ್ ಚಿಕ್ಕ ವಯಸ್ಸಿನಿಂದಲೇ ನೃತ್ಯದ ಗೀಳನ್ನು ಹಚ್ಚಿಕೊಂಡವರು. ಬೆಂಗಳೂರಿನಲ್ಲಿ ಸೋಹನ್ಲಾಲ್ ಅವರಿಂದ ಕಥಕ್ ಹಾಗೂ ಮಣಿಪುರಿ ಕಲಿಯಲು ಪ್ರಾರಂಭಿಸಿದರು. ಜೊತೆಗೆ ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. ಆನರ್ಸ್ನ ಓದು.
ಸಹಪಾಠಿಗಳನ್ನು ಜೊತೆಗೂಡಿಸಿಕೊಂಡು ನೃತ್ಯ ಕಲಿಸುವುದು ಹಾಗೂ ಪ್ರದರ್ಶನ ನೀಡುವುದು ಆಗಲೇ ಪ್ರಾರಂಭ (ಅವರಿಗೆ ಆ ಸಮಯದಲ್ಲಿಯೇ ಎಂ.ಎಸ್. ನಟರಾಜನ್ ಅವರ ಪರಿಚಯವಾದುದು. ಗೆಳೆತನ ಗಾಢವಾಗಿ ಮುಂದೆ ನಟರಾಜನ್ ಜೀವನ ಸಂಗಾತಿಯೂ ಆದುದು ಇನ್ನೊಂದು ವಿಷಯ). ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ ಪಡೆದು ಮಹಾನ್ ಗುರು ಶಂಭು ಮಹಾರಾಜ್ ಮತ್ತು ಸುಂದರ ಪ್ರಸಾದ್ ಅವರಲ್ಲಿ ಕಥಕ್ ಕಲಿಯುವ ಭಾಗ್ಯವೂ ಅವರಿಗೆ ದೊರೆಯಿತು.
ದೀರ್ಘ, ದಕ್ಷ ಶಿಕ್ಷಣ-ದಿಂದ ಲಖನೌ ಮತ್ತು ಜೈಪುರ್ ಘರಾಣಗಳ ಅತ್ಯುತ್ತಮ ಅಂಶಗಳ ಆಗರವಾದರು. ರಷ್ಯಾದಲ್ಲಿ ೧೯೫೮ರಲ್ಲಿ ಬ್ಯಾಲೆ ಅಧ್ಯಯನ ಮಾಡಲು ಇಬ್ಬರು ಆಯ್ಕೆಯಾಗಬೇಕಿತ್ತು. ಈ ಆಯ್ಕೆ ಅಪೇಕ್ಷಿಸಿದ್ದ ೧,೮೦೦ ಜನರಲ್ಲಿ ಪ್ರಥಮ ಸ್ಥಾನ ಗಳಿಸಿ ಆಯ್ಕೆ-ಯಾದ ಮಾಯಾರಾವ್, ಮಾಸ್ಕೊದ ಇನ್ಸ್ಟಿ-ಟ್ಯೂಟ್ ಆಫ್ ಥಿಯೇಟರ್ ಆರ್ಟ್ಸ್ನಲ್ಲಿ ಬ್ಯಾಲೆ ಸಂಯೋಜನೆಯಲ್ಲಿ ವಿಶೇಷ ಶಿಕ್ಷಣ ಪಡೆದರು. ಈ ತರಬೇತಿಯು ಮಾಯಾರಾವ್ ಅವರಿಗೆ ಒಂದು ಹೊಸ ಲೋಕವನ್ನೇ ತೆರೆದಂತಾಯಿತು. ರಷ್ಯಾದವರು ತಮ್ಮ ದೇಶಕ್ಕೆ ಅನೇಕ ಸಲ ಬರಮಾಡಿಕೊಂಡರು. ಶಾಕುಂತಲ, ರಾಮಾಯಣ ನೃತ್ಯ ನಾಟಕಗಳನ್ನು ಮಾಯಾರಾವ್ ರಷ್ಯನ್ನರಿಗಾಗಿ ನಿರ್ದೇಶಿಸಿ, ಖ್ಯಾತಿ ಗಳಿಸಿದರು.
ನೃತ್ಯ ದೇಗುಲ: ಮಾಯಾರಾವ್ ೧೯೬೪ರಲ್ಲಿ ದೆಹಲಿಯಲ್ಲಿ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೊಗ್ರಫಿ ಸ್ಥಾಪಿಸಿ ೨೩ ವರ್ಷ ನಡೆಸಿದರೂ, ಸಾಂಸ್ಕೃತಿಕ - ಕ್ಷೇತ್ರದ ರಾಜಕೀಯಗಳಿಂದ ನೊಂದು, ಕರ್ನಾಟಕಕ್ಕೆ ಹಿಂತಿರುಗಿದರು. ಅದೇ ಸಂಸ್ಥೆಯನ್ನು ಬೆಂಗಳೂರಿನಲ್ಲಿ ೧೯೮೭ರಲ್ಲಿ ಸ್ಥಾಪಿಸಿ, ಈವರೆಗೆ ೩,೦೦೦ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ-ದ್ದಾರೆ! ಇದು ಕೊರಿಯಗ್ರಫಿಯಲ್ಲಿ ರಾಷ್ಟ್ರದ ಏಕ-ಮೇವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಗುರಿಯಾಗಿ-ರುವುದು, ರಾಜ್ಯದ ಹೆಮ್ಮೆ!
ದೇಶದ ಭಿನ್ನ ರಾಜ್ಯಗಳಿಂದಲ್ಲದೆ ಆಸಕ್ತರು ವಿಶ್ವದ ಅನೇಕ ಭಾಗಗಳಿಂದಲೂ ಇಲ್ಲಿ ಕಲಿಯಲು ಬರು-ತ್ತಾರೆ. ಮಾಯಾ ಅವರಿಗೆ ಅಪಾರ ಶಿಷ್ಯ ವಾತ್ಸಲ್ಯ. ಶಿಷ್ಯರಿಗೆ ದೀದಿ ಅವರಲ್ಲಿ ನೈಜ ನಿಷ್ಠೆ. ಇಂದು ಅವರ ಶಿಷ್ಯರು ರಾಷ್ಟ್ರದ ಎಲ್ಲ ಕಡೆಯಲ್ಲದೆ ಪ್ರಪಂಚದ ಅನೇಕ ದೇಶಗಳಲ್ಲಿ ಗೆಜ್ಜೆ ನಿರಂತರವಾಗಿ ನಿನದಿಸುವಂತೆ ಮಾಡಿದ್ದಾರೆ.
ವರ್ಣರಂಜಿತ ನೃತ್ಯ ಸಂಯೋಜನೆ: ಮಾಯಾರಾವ್ ಅವರ ನೃತ್ಯ ಸಂಯೋಜನೆ ನೃತ್ಯ ಲೋಕದಲ್ಲಿ ಒಂದು ಹೊಸ ಅಲೆಯನ್ನೇ ಸೃಷ್ಟಿಸಿತು. ಐತಿಹಾಸಿಕ, ಸಾಮಾ-ಜಿಕ ವಿಷಯಗಳೂ ರಂಗವನ್ನೇರಿದವು. ಅವುಗಳಲ್ಲಿ ಅಮೀರ್ ಖುಸ್ರು ಒಂದು ಅದ್ಭುತ ಪ್ರಯೋಗ. ಕಥಕ್ನ ಹೆಜ್ಜೆ, ಮಧುರ ಸಂಗೀತ ಅರ್ಥಪೂರ್ಣ ಬೆಳಕು ಸಂಯೋಜನೆಗಳಿಂದ ಅಮೀರ್ ಖುಸ್ರು ಒಂದು ಗಾಢ ಅನುಭವ ನೀಡುತ್ತದೆ.
ಕುವೆಂಪು ಅವರ ರಾಮಾಯಣ ದರ್ಶನಂ, ಹೊಯ್ಸಳ ವೈಭವ, ಭಾಸನ ಊರುಭಂಗ, ವಿಜಯನಗರ ವೈಭವ, ಸೂರದಾಸ್ ಎಲ್ಲವೂ ಭಿನ್ನ ಕಾರಣಗಳಿಂದ ವಿಶಿಷ್ಟವಾದವು. ಕಳೆದ ತಿಂಗಳು ಅವರು ನಿರ್ದೇಶಿಸಿದ ‘ಕಥಕ್ ಥ್ರೂ ದಿ ಏಜಸ್’ - ನೃತ್ಯ ಸಂಯೋಜನೆಯಲ್ಲೇ ಒಂದು ಮೈಲಿಗಲ್ಲು! ಆಳವಾದ ಅಧ್ಯಯನ, ವರ್ಣರಂಜಿತ ವೇಷಭೂಷಣ, ಹೊಮ್ಮುವ ಬೆಳಕು, ಮಧುರ ಸಂಗೀತಗಳಿಂದ ಅವರ ನೃತ್ಯ ಸಂಯೋಜನೆ ಕಿರಿಯರಿಗೆ ಕೈ ದೀವಿಗೆ.
ಡಾ. ಮಾಯಾರಾವ್ ಅವರು ದೇಶ ವಿದೇಶ-ಗಳಲ್ಲಿ ನರ್ತಿಸಿ, ಗಣ್ಯ ನರ್ತಕಿಯಾಗಿ ಗೌರವಾನ್ವಿತ-ರಾಗಿದ್ದಾರೆ. ಲಯಕಾರಿಯಾದ ಕಥಕ್ನಲ್ಲಿ ಸುಂದರ ಅಭಿನಯವನ್ನೂ ಬೆರೆಸಿ ಮೆರುಗು ನೀಡುತ್ತಿದ್ದರು. ಅವರು ನಿರ್ದೇಶಿಸಿದ ನೃತ್ಯ ರೂಪಕಗಳು ಪ್ರಪಂಚದ ೩೩ ದೇಶಗಳಲ್ಲಿ ಪ್ರದರ್ಶನಗೊಂಡು ಭಾರತಕ್ಕೆ ಕೀರ್ತಿ ತಂದಿವೆ!
ಕರ್ನಾಟಕ ಸಂಗೀತ ನೃತ್ಯ ಅಕಾ-ಡೆಮಿಯ ಅಧ್ಯಕ್ಷ-ರೂ ಆಗಿದ್ದ ಮಾಯಾರಾವ್ ಅವರಿಗೆ ರಾಜ್ಯದ ಉನ್ನತ ಪ್ರಶಸ್ತಿ ಶಾಂತಲಾ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳೂ ಸಂದಿರುವುದು ಸಹಜವೇ. ಇವುಗಳಿಗೆ ಕಳಶಪ್ರಾಯವಾಗಿ ಕೇಂದ್ರ ಸಂಗೀತ ನಾಟಕ ಅಕಾ-ಡೆಮಿ ಪ್ರಶಸ್ತಿಯನ್ನು ರಾಷ್ಟ್ರಪತಿ-ಗಳಿಂದ ಸ್ವೀಕರಿಸಿ-ದ್ದಾರೆ (ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದ್ದು ಅವರ ಸ್ವಾಭಿಮಾನಕ್ಕೆ ಸಾಕ್ಷಿಯೇ?!) ಬೆಂಗಳೂರು ವಿಶ್ವವಿದ್ಯಾ-ನಿಲಯದಿಂದ ಡಾಕ್ಟರೇಟ್ ಹಾಗೂ ಗಾಯನ ಸಮಾಜದಿಂದ ನೃತ್ಯ ಕಲಾರತ್ನ ಬಿರುದುಗಳೂ ಅವರನ್ನು ಅಲಂಕರಿಸಿವೆ. ಒಟ್ಟಿನಲ್ಲಿ ನೃತ್ಯ ಕಲೆಗೆ ವರ್ಚಸ್ಸು ನೀಡಿ, ಚೈತನ್ಯ ನೀಡಿದ ಡಾ. ಮಾಯಾರಾವ್ ಸಾಧಕರಿಗೆ ಎಂದೂ ದಾರಿದೀಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.