ಕಠ್ಮಂಡು (ಪಿಟಿಐ): ನೇಪಾಳ ಭೂಕಂಪನದಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ ಮಂಗಳವಾರ ಮಧ್ಯಾಹ್ನದ ವೇಳೆಗೆ 4,350ಕ್ಕೆ ಏರಿಕೆ ಕಂಡಿದೆ. ಸುಮಾರು 8 ಸಾವಿರ ಮಂದಿ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಎಣಿಕೆಗೆ ಸಿಗದಷ್ಟು ಜನರು ಜೀವಂತ ಸಮಾಧಿಯಾಗಿದ್ದಾರೆ. ಸಾವಿನ ಸಂಖ್ಯೆ 5,000ಕ್ಕೆ ಮುಟ್ಟುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹೇಳಿದೆ.
ಈ ನಡುವೆ, ಭೂಕಂಪ ಸಂತ್ರಸ್ಥರಿಗಾಗಿ ನಡೆಯುತ್ತಿರುವ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ, ಸಾಕಷ್ಟು ಜನರಿಗೆ ನೆರವು ಲಭಿಸುತ್ತಿಲ್ಲ ಎಂದು ಪ್ರಧಾನ ಮಂತ್ರಿ ಸುಶೀಲ್ ಕೊಯಿರಾಲ ಹೇಳಿದ್ದಾರೆ.
ನೇಪಾಳದ 60 ಜಿಲ್ಲೆಗಳು ಭೂಕಂಪನಕ್ಕೆ ತತ್ತರಿಸಿ ಹೋಗಿವೆ. ನೂರಾರು ಹಳ್ಳಿಗಳು ಮಣ್ಣಿನಲ್ಲಿ ಸಮಾಧಿಯಾಗಿವೆ. ಹಲವೆಡೆ ಆಹಾರ, ಔಷಧದ ತೀವ್ರ ಕೊರತೆ ಎದುರಾಗಿದೆ. ಮತ್ತೆ ಭೂಕಂಪನ ಉಂಟಾಗಬಹುದು ಎಂಬ ಭೀತಿಯಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಬಯಲು ಮತ್ತು ರಸ್ತೆ ಬದಿಗಳಲ್ಲಿ ಆಶ್ರಯ ಪಡೆದಿದ್ದಾರೆ.
ಕಠ್ಮಂಡು ಅಕ್ಷರಶಃ ಭೂತನಗರಿಯಂತಾಗಿದೆ. ಕಟ್ಟಡಗಳ ಅವಶೇಷ ಕೆದಕಿದಂತೆಲ್ಲ ಹೆಣಗಳ ರಾಶಿಯೇ ಸಿಗುತ್ತಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಸಾಗಿದೆ. ಕಠ್ಮಂಡುವಿನ ಪಶುಪತಿನಾಥ ದೇವಸ್ಥಾನದ ಪಕ್ಕದಲ್ಲಿ ಹರಿಯುತ್ತಿರುವ ಭಾಗಮತಿ ನದಿಯ ದಡದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ನೂರಾರು ಶವಗಳ ಸಾಮೂಹಿಕ ಅಂತ್ಯಕ್ರಿಯೆ ದುರಂತದ ಭೀಕರತೆಗೆ ಸಾಕ್ಷಿಯಾಗಿದೆ.