ಬೆಳಗಾವಿ: ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಒಪ್ಪಿಗೆ ನೀಡಲು ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಆರ್ಸಿಯು) ಸಿಂಡಿಕೇಟ್ ಸಮಿತಿ ಆಕ್ಷೇಪಿಸಿದೆ. ಅಲ್ಲದೆ, ನಿಯಮ ಉಲ್ಲಂಘಿಸಿ ನೇಮಕಾತಿ ಮಾಡಿಕೊಳ್ಳಲಾಗಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆಗೆ ಉಪ ಸಮಿತಿ ರಚಿಸಲು ನಿರ್ಧರಿಸಿದೆ.
ಹೀಗಾಗಿ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ, ತರಾತುರಿಯಲ್ಲಿ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದ ಹಿಂದಿನ ಕುಲಪತಿ ಪ್ರೊ. ಬಿ.ಆರ್. ಅನಂತನ್ ಹಾಗೂ ಕೆಲವು ಅಧಿಕಾರಿಗಳ ಮೇಲೆ ‘ತೂಗು ಕತ್ತಿ’ ತಿರುಗಲು ಶುರುವಾಗಿದೆ. ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರು, ಕಂಪ್ಯೂಟರ್ ಆಪರೇಟರ್ ಸೇರಿದಂತೆ ಸುಮಾರು 130 ಬೋಧಕೇತರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆಯಿದೆ, ಪಕ್ಷಪಾತ ಹಾಗೂ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದಂತೆ ರಾಜ್ಯ ಸರ್ಕಾರವು ಈ ಹಿಂದೆ ಎರಡು ಬಾರಿ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿತ್ತು.
‘ರಾಜ್ಯಪಾಲರ ನಿರ್ದೇಶನದಂತೆ ಕುಲಪತಿಗಳು ನಿವೃತ್ತಿಯಾಗುವ ಮೂರು ತಿಂಗಳು ಮೊದಲು ನೇಮಕಾತಿ ಸೇರಿದಂತೆ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಸೂಚಿಸಲಾಗಿದೆ. ಹೀಗಿದ್ದರೂ ಜೂ. 16ರಂದು ಸಿಂಡಿಕೇಟ್ ಸಭೆ ಕರೆದು ನೇಮಕಾತಿಗೆ ಅನುಮೋದನೆ ಪಡೆಯಲು ಯತ್ನಿಸಲಾಗಿತ್ತು ಎಂದು ತಿಳಿದು ಬಂದಿದೆ. ನೇಮಕಾತಿ ಆದೇಶ ನೀಡುವ ಕುರಿತ ವಿಷಯವನ್ನು ಮಂಡಿಸಬಾರದು. ಈ ಪತ್ರವನ್ನು ಸಿಂಡಿಕೇಟ್ ಗಮನಕ್ಕೆ ತರಬೇಕು. ಸರ್ಕಾರದ ನಿರ್ದೇಶನ ಉಲ್ಲಂಘಿಸಿದರೆ ಕುಲಸಚಿವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಉನ್ನತ ಶಿಕ್ಷಣ ಇಲಾಖೆಯಿಂದ ಜೂ. 16ರಂದು ಪತ್ರ ಬಂದಿತ್ತು. ಹೀಗಿದ್ದರೂ ಅಂದಿನ ಕುಲಪತಿ ಪ್ರೊ. ಅನಂತನ್ ಅವರು ಅದೇ ದಿನ ನಡೆದ ಸಿಂಡಿಕೇಟ್ ಸಭೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ಅನುಮೋದನೆ ಪಡೆದುಕೊಂಡಿದ್ದರು. ಬಳಿಕ ನೇಮಕಾತಿ ಆದೇಶವನ್ನೂ ಅಭ್ಯರ್ಥಿಗಳಿಗೆ ಕೊಡಿಸಿದ್ದರು.
‘ಸೆಪ್ಟೆಂಬರ್ 29ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಬೋಧಕೇತರ ಸಿಬ್ಬಂದಿ ನೇಮಕಾತಿ ಮಾಡಿಕೊಂಡಿರುವ ಕಡತಕ್ಕೆ ಮಂಜೂರಾತಿ ನೀಡುವಂತೆ ಕೋರಲಾಗಿದೆ. ನೇಮಕಾತಿ ಆದೇಶ ನೀಡದಂತೆ ಸರ್ಕಾರದಿಂದ ಬಂದ ಪತ್ರವನ್ನು ಸಭೆಯ ಗಮನಕ್ಕೆ ತರದೇ ನೇಮಕಾತಿ ಮಾಡಿಕೊಳ್ಳಲಾಗಿದೆ. ಹೀಗಾಗಿ ನೇಮಕಾತಿ ಪ್ರಕ್ರಿಯೆ ಸಮರ್ಪಕವಾಗಿಯದೇ ಎಂಬ ಬಗ್ಗೆ ಮೊದಲು ತನಿಖೆಯಾಗಲಿ. ಸಮರ್ಪಕವಾಗಿದ್ದರೆ ಆ ಬಳಿಕ ಇದಕ್ಕೆ ಅನುಮೋದನೆ ನೀಡಲಾಗುವುದು’ ಎಂದು ಕೆಲವು ಸದಸ್ಯರು ಹೇಳುತ್ತಿದ್ದಾರೆ.
ಹೀಗಾಗಿ ನೇಮಕಾತಿ ಕುರಿತು ತನಿಖೆ ನಡೆಸಲು ಸಿಂಡಿಕೇಟ್ ಸದಸ್ಯರಾದ ನೀತಾ ವೈ. ಪಾಟೀಲ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಲಾಗಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಸಿಂಡಿಕೇಟ್ ಒಪ್ಪಿಗೆ ಮೊದಲೇ ನೇಮಕ!
ಬೆಳಗಾವಿ: ಸಿಂಡಿಕೇಟ್ ಅನುಮೋದನೆ ಸಿಗುವ ಮೊದಲೇ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಜೂ. 16ರ ಸಿಂಡಿಕೇಟ್ ಸಭೆಯಲ್ಲಿ ನೇಮಕಾತಿಗೆ ಮಾತ್ರ ಅನುಮೋದನೆ ಪಡೆಯಲಾಗಿತ್ತು. ಆದರೆ, ಆಗಸ್ಟ್ 19ರಂದು ನಿವೃತ್ತರಾಗಲಿದ್ದ ಪ್ರೊ. ಅನಂತನ್ ಅವರು ಸಿಬ್ಬಂದಿ ನೇಮಕ ಮಾಡಿಕೊಂಡ ಕಡತಕ್ಕೆ ಸಿಂಡಿಕೇಟ್ನ ಅನುಮೋದನೇ ಪಡೆಯದೇ ಜುಲೈ 1 ರಂದು 129 ಅಭ್ಯರ್ಥಿಗಳಿಗೆ ಆದೇಶ ಪತ್ರವನ್ನು ಕೊಡಿಸಿದ್ದಾರೆ. ಈಗಾಗಲೇ ಅವರೆಲ್ಲ ಕೆಲಸಕ್ಕೆ ಹಾಜರಾಗಿದ್ದು ಸಂಬಳವನ್ನೂ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಸಿಂಡಿಕೇಟ್ ನಿರ್ಧಾರದಂತೆ ಕ್ರಮ’
ಬೋಧಕೇತರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಎರಡು ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಚುನಾವಣೆ ನೀತಿ ಸಂಹಿತೆ ಸೇರಿ-ದಂತೆ ಕೆಲವು ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಕಳೆದ ಸಿಂಡಿಕೇಟ್ ಸಭೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ಅನುಮೋದನೆ ಸಿಕ್ಕಿತ್ತು. ಆದರೆ, ಅಂದಿನ ಕುಲಪತಿಗಳ ಅಧಿಕಾರಾವಧಿ ಮುಗಿಯುತ್ತಿರುವುದರಿಂದ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಬಾರದು ಎಂದು ಸಭೆಯ ನಂತರ ಸರ್ಕಾರದಿಂದ ಆದೇಶ ಬಂದಿತ್ತು. ಸರ್ಕಾರದಿಂದ ಪತ್ರ ಬಂದಿರುವುದರಿಂದ ಈಗ ಸಿಂಡಿಕೇಟ್ ಸದಸ್ಯರು ನೇಮಕಾತಿಗೆ ಆಕ್ಷೇಪಿಸಿದ್ದಾರೆ. ಈ ಕುರಿತ ಕಡತ ಪರಿಶೀಲಿಸಲು ಸಿಂಡಿಕೇಟ್ ಸದಸ್ಯರನ್ನು ಒಳಗೊಂಡ ಉಪ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಅದು ನೀಡುವ ವರದಿಆಧರಿಸಿ ಸಿಂಡಿಕೇಟ್ ಕೈಗೊಳ್ಳುವ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಪ್ರೊ. ದಶರಥ ಅಲಬಾಳ,ಕುಲಪತಿ, ಆರ್ಸಿಯು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.