ಡಾ. ಎಂ. ಚಿದಾನಂದಮೂರ್ತಿ ಅವರ ‘ಗೀತೆ– ನೇರ ಉತ್ತರ’ (ವಾ.ವಾ., ಮಾ. 19) ಎಂಬ ಬರಹ ಮುಕ್ತಮನದ ವ್ಯಾಖ್ಯಾನವಲ್ಲ. ಅದು ನೇರ ಉತ್ತರವೂ ಅಲ್ಲ.
ಗೀತೆಯ 9ನೇ ಅಧ್ಯಾಯದ 32 ಮತ್ತು 33ನೇ ಶ್ಲೋಕಗಳ ನೇರ ಅರ್ಥವನ್ನು ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ಪ್ರಕಟಿಸಿರುವ ‘ಶ್ರೀಮದ್ಭಗವದ್ಗೀತಾ’ (6ನೇ ಮುದ್ರಣ, 1982) ದಲ್ಲಿ ಸ್ಪಷ್ಟವಾಗಿ ಹೀಗೆ ಹೇಳಿದೆ.
1) ‘ಎಲೈ ಅರ್ಜುನ, ಪಾಪಯೋನಿಜರೂ (ಅಂತ್ಯಜರೂ), ಸ್ತ್ರೀಯರೂ, ವೈಶ್ಯರೂ, ಶೂದ್ರರೂ ಕೂಡ ನನ್ನನ್ನು ಆಶ್ರಯಿಸಿ ಪರಮಗತಿಯನ್ನು ಹೊಂದುತ್ತಾರೆ...’ (32)
2) ‘ಹೀಗಿರುವಾಗ ಪುಣ್ಯಯೋನಿಜರೂ ಭಕ್ತರೂ ಆದ ಬ್ರಾಹ್ಮಣರು ಮತ್ತು ರಾಜರ್ಷಿಗಳು ಪರಮಗತಿಯನ್ನು ಹೊಂದುವರೆಂದು ಹೇಳಬೇಕಾದುದು ಏನಿದೆ? ಅನಿತ್ಯವೂ ಅಸುಖವೂ ಆದ ಈ ಲೋಕವನ್ನು ಪಡೆದಿರುವ ನೀನು ನನ್ನನ್ನು ಭಜಿಸು’ (33)
ಅಂತ್ಯಜರನ್ನ, ಸ್ತ್ರೀಯರನ್ನ, ವೈಶ್ಯರನ್ನ, ಶೂದ್ರರನ್ನ ಪಾಪಯೋನಿಜರೂ ಎಂದು, ಬ್ರಾಹ್ಮಣರು ಮತ್ತು ರಾಜರ್ಷಿಗಳನ್ನ ಪುಣ್ಯಯೋನಿಜರೂ ಎಂದು ಕೃಷ್ಣ ಹೇಳಿದ್ದಾನೆ. ಗೊಲ್ಲನಾದ ಕೃಷ್ಣ ಹೀಗೆ ಹೇಳಲು ಸಾಧ್ಯವಿಲ್ಲ. ಆತನ ಹೆಸರಿನಲ್ಲಿ ನಡೆಸಿರುವ ಕೈವಾಡ ಇದಾಗಿದೆ. ಆದರೆ ಚಿದಾನಂದಮೂರ್ತಿಯವರು ಬ್ರಾಹ್ಮಣರು ಮತ್ತು ರಾಜರ್ಷಿಗಳನ್ನೂ ಪಾಪಯೋನಿಜರು ಎಂದು ಕೃಷ್ಣ ಹೇಳಿದ್ದಾನೆ ಎಂದು ತಿರುಚಿರುವುದು ಅವರ ವಿದ್ವತ್ತಿಗೆ ಶೋಭೆಯಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.