ಬೆಳಗಾವಿ: ನಿಯಮಗಳಿಗೆ ವಿರುದ್ಧವಾಗಿ ನೋಂದಣಿ ಫಲಕಗಳ ಮೇಲೆ ಅಕ್ಷರ ಬರೆಸಿಕೊಳ್ಳುವ ವಾಹನ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಗುರುವಾರ ವಿಧಾನಸಭೆಗೆ ತಿಳಿಸಿದರು.
ಬಿಜೆಪಿಯ ಆರ್. ಅಶೋಕ ಪರವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರವಾಗಿ ಕೃಷ್ಣಬೈರೇಗೌಡ ಉತ್ತರ ನೀಡಿದರು.
ನಂಬರ್ ಪ್ಲೇಟ್ ಇಲ್ಲದೆ ಹಾಗೂ ನಂಬರ್ ಪ್ಲೇಟ್ಗಳನ್ನು ನಕಲು ಮಾಡಿ ಸಂಚರಿಸುತ್ತಿರುವ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳಲು ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂತಹ 3,531 ವಾಹನ ಸವಾರರ ವಿರುದ್ಧ ಮೊಕದ್ದಮೆ ದಾಖಲು ಮಾಡಲಾಗಿದೆ. ಇವರಿಂದ ರೂ 4.45 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಇಂತಹ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ಅವರು ಹೇಳಿದರು.
ಅನೇಕ ಶಾಸಕರೇ ವಾಹನಗಳ ನೋಂದಣಿ ಫಲಕಗಳ ಮೇಲೆ 'ಶಾಸಕರು' ಎಂದು ಬರೆಸಿಕೊಂಡಿದ್ದಾರೆ. ಅದು ಕೂಡ ತಪ್ಪು ಎಂದು ಕೃಷ್ಣಬೈರೇಗೌಡ ತಿಳಿಸಿದರು.